ನವದೆಹಲಿ: ಶೃಂಗೇರಿ ಶಾರದಾ ಪೀಠದ 12ನೇ ಪೀಠಾಧ್ಯಕ್ಷರಾಗಿದ್ದ ವಿಜಯನಗರ ಸಾಮ್ರಾಜ್ಯ ಸ್ಥಾಪಕ ವಿದ್ಯಾರಣ್ಯರ ಪ್ರತಿಮೆಯನ್ನು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರಣ್ಯ ಇನ್ಸ್ಟಿಟ್ಯೂಟ್ ಆಫ್ ನಾಲೆಡ್ಜ್ ಆ್ಯಂಡ್ ಅಡ್ವಾನ್ಸ್ಡ್ ಸ್ಟಡೀಸ್ ಸೆಂಟರ್ನಲ್ಲಿ (ವಿದ್ಯಾರಣ್ಯ) ಗುರುವಾರ ಅನಾವರಣ ಮಾಡಲಾಯಿತು.
ಪ್ರತಿಮೆ ಅನಾವರಣಗೊಳಿಸಿದ ಶೃಂಗೇರಿ ಶಾರದಾ ಪೀಠದ ಮುಖ್ಯ ಸಲಹೆಗಾರ ವಿ.ಆರ್. ಗೌರಿಶಂಕರ್, ‘ಭಾರತೀಯ ಜ್ಞಾನ ಪರಂಪರೆಯುಳ್ಳ ಸನಾತನ, ಧಾರ್ಮಿಕ ಆಧಾರಿತ ಶಿಕ್ಷಣ ಮತ್ತು ಸಂಶೋಧನೆ ನಡೆಸುವ ಉದ್ದೇಶದಿಂದ ಈ ಸಂಸ್ಥೆಗೆ ವಿದ್ಯಾರಣ್ಯರ ಹೆಸರಿಡಲಾಗಿದೆ. ಇದೀಗ ಶೃಂಗೇರಿ ಶಾರದಾ ಪೀಠದ ನೆರವಿನೊಂದಿಗೆ ಪ್ರತಿಮೆ ಪ್ರತಿಷ್ಠಾಪನೆಗೊಂಡಿದೆ. ಶೃಂಗೇರಿ ಪೀಠದ ಸಹಯೋಗದಲ್ಲಿ ವಿದ್ಯಾರಣ್ಯರ ಕೊಡುಗೆಯ ಕುರಿತು ಇಲ್ಲಿ ಹೆಚ್ಚಿನ ಅಧ್ಯಯನ ನಡೆಸಲಾಗುತ್ತದೆ. ಅವರ ಪೀಠ ಸ್ಥಾಪಿಸುವ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದರು. ‘ಈ ಹಿಂದೆ ಜೆಎನ್ಯು ಒಳಕ್ಕೆ ಬರುವುದಕ್ಕೂ ಭಯದ ವಾತಾವರಣ ಇತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ’ ಎಂದರು.
ಜೆಎನ್ಯು ಕುಲಪತಿ ಶಾಂತಿಶ್ರೀ ಡಿ. ಪಂಡಿತ್, ಸಂಸ್ಥೆಯ ನಿರ್ದೇಶಕ ಅಮಿತ್ ಶರ್ಮ ಹಾಗೂ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಂಗಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.