ADVERTISEMENT

ಡ್ರಗ್ಸ್ ಜಾಲದ ತನಿಖೆಗೆ ಗುಪ್ತಚರ ಇಲಾಖೆ ಬಳಕೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 8:06 IST
Last Updated 13 ಸೆಪ್ಟೆಂಬರ್ 2020, 8:06 IST
 ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವ ಬಸವರಾಜ ಬೊಮ್ಮಾಯಿ    

ಬೆಂಗಳೂರು: ‘ಗಡಿ ರಾಜ್ಯಗಳಿಂದ ಬರುವ ಮಾದಕ ವಸ್ತುಗಳ ನಿಯಂತ್ರಣಕ್ಕೆ ಇನ್ನಷ್ಟು ಬಿಗಿ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಗಡಿ ಜಿಲ್ಲೆಗಳ ಪೊಲೀಸರಿಗೆ ನಿರ್ದೇಶನ ನೀಡಲಾಗುವುದು. ಡ್ರಗ್ಸ್ ಜಾಲದ ತನಿಖೆಗೆ ಗುಪ್ತಚರ ಇಲಾಖೆಯ ಪೊಲೀಸರನ್ನೂ ಬಳಸಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಡ್ರಗ್ಸ್ ಜಾಲದ ವಿರುದ್ಧ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ತನಿಖೆ ದೃಷ್ಟಿಯಲ್ಲಿ ಮುಂದಿನ ವಾರ ಅತ್ಯಂತ ಮಹತ್ವದ್ದು’ ಎಂದರು.

‘ಕೇಂದ್ರ ಅಪರಾಧ ದಳವನ್ನು (ಸಿಸಿಬಿ) ಇನ್ನಷ್ಟು ಬಲಗೊಳಿಸುತ್ತೇವೆ. ಸಿಸಿಬಿಗೆ ಹೆಚ್ಚಿನ ಸಿಬ್ಬಂದಿ, ಸೌಲಭ್ಯ ಕೊಡುವ ಬಗ್ಗೆಯೂ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

ADVERTISEMENT

‘ಎನ್‌ಡಿಪಿಎಸ್‌ (ನಾರ್ಕೊಟಿಕ್ ಡ್ರಗ್ಸ್ ಆಂಡ್ ಸೈಕೊಟ್ರಾಫಿಕ್ ಸಬ್‌ಸ್ಟೆನ್ಸಸ್) ಕಾಯ್ದೆ ಜಾರಿಯಲ್ಲಿ ಕೆಲ ಸಮಸ್ಯೆಗಳಿವೆ. ಅವುಗಳ ನಿವಾರಣೆಗೆ ತಜ್ಞರ ಜತೆ ಶೀಘ್ರದಲ್ಲೇ ಸಮಾಲೋಚನೆ ನಡೆಸುತ್ತೇನೆ’ ಎಂದರು.

‘ಡ್ರಗ್ಸ್‌ ಜಾಲದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಸಮಾಜ ಕೂಡ ಜಾಗೃತ ಆಗಬೇಕು. ಹೀಗಾಗಿ, ಈ ಕುರಿತು ಯಾವುದೇ ಹೇಳಿಕೆ, ಮಾಹಿತಿ ಬಂದರೂ ಗಂಭೀರವಾಗಿ ಪರಿಗಣಿಸಲು ಸೂಚಿಸಿದ್ದೇನೆ. ಮಾಹಿತಿ ಯಾವುದೇ ರೂಪದಲ್ಲಿ ಬಂದರೂ ತನಿಖೆಗೆ ಒಳಪಡಿಸಲು ಸೂಚಿಸಿದ್ದೇನೆ. ಏನೇ ಮಾಹಿತಿ ಇದ್ದರೂ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ’ ಎಂದೂ ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.