ADVERTISEMENT

ನರಬಲಿ ಕೇಳುತ್ತಿರುವ ಸರ್ಕಾರ: ದೇವನೂರ ಮಹಾದೇವ ಕಿಡಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2022, 19:48 IST
Last Updated 3 ಏಪ್ರಿಲ್ 2022, 19:48 IST
ದೇವನೂರ ಮಹಾದೇವ
ದೇವನೂರ ಮಹಾದೇವ   

ಮೈಸೂರು: ‘ಬಜರಂಗದಳ, ಶ್ರೀರಾಮಸೇನೆಗೆ ಸರ್ಕಾರವೇ ಕಣ್ಸನ್ನೆ ಮಾಡಿ ಕಾನೂನು ಸ್ಥಿತಿ ಹದಗೆಡಿಸಲು ಛೂ ಬಿಟ್ಟಿದೆ. ಮಾಂಸಾಹಾರಿಗಳು ಪ್ರಾಣಿವಧೆ ಮಾಡುತ್ತಿದ್ದರೆ, ಸರ್ಕಾರ ತನ್ನ ಗೆಲುವಿಗೆ ನರಬಲಿ ಕೇಳುತ್ತಿದೆ’ ಎಂದು ದೇವನೂರ ಮಹಾದೇವ ಕಿಡಿ ಕಾರಿದ್ದಾರೆ.

ಇಲ್ಲಿನ ಶಾಂತಿನಗರದ ಮುಸ್ಲಿಮರ ಮಳಿಗೆಯಲ್ಲಿ ‘ಶಾಂತಿ ಸೌಹಾರ್ದ, ಸಹಬಾಳ್ವೆಯ ಸಂದೇಶ ಸಾರುವ ಕಾರಣಕ್ಕಾಗಿ’ ಮಾಂಸ ಖರೀದಿಸಿ ಮಾತನಾಡಿದರು.‘ಆ ಸಂಘಟನೆಗಳ ಕಾರ್ಯಕರ್ತರಿಗೆ ಉದ್ಯೋಗ ನೀಡಿದ್ದರೆ ಈ ರೀತಿ ಆಗುತ್ತಿರಲಿಲ್ಲ.ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲ. ದ್ವೇಷ ಹೆಚ್ಚಿಸಿ ಜನ ಸಮುದಾಯವನ್ನು ಒಡೆಯಲು ಸರ್ಕಾರವೇ ಕುಮ್ಮಕ್ಕು ಕೊಡುತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡರು.

ಸಕಲೆಂಟು ಜಾತಿ ಸಹಬಾಳ್ವೆ ಸಂಘ, ರಾಜ್ಯ ರೈತ ಸಂಘ ಹಾಗೂ ದಲಿತ ಸಂಘರ್ಷ ಸಮಿತಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

‘ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬರಲು ವೋಟ್ ಬ್ಯಾಂಕ್‌ಗಾಗಿ ಜನರನ್ನು ಒಡೆದು, ದ್ವೇಷವನ್ನು ಎಲ್ಲೆಡೆ ಹಬ್ಬಿಸಲಾಗುತ್ತಿದೆ. ದ್ವೇಷವೇ ಸರ್ಕಾರಕ್ಕೆ ಎನರ್ಜಿ ಡ್ರಿಂಕ್ಸ್ ಆಗಿದೆ’ ಎಂದರು.

‘ವಿರೋಧ ಪಕ್ಷಗಳು ಮಂಕಾಗಿ ಕುಳಿತಿರುವ ಈ ಹೊತ್ತಿನಲ್ಲಿ ಎಲ್ಲ ಹದಿನೆಂಟು ಜಾತಿಗಳಲ್ಲೂ ವಿವೇಕ ಇರುವವರು ಮಾತನಾಡಬೇಕು, ಕ್ರಿಯಾಶೀಲರಾಗಬೇಕು’ ಎಂದು ಕರೆ ನೀಡಿದರು.

‘ಹಳೆ ಪೇಪರ್, ಖಾಲಿ ಸೀಸ ಕೊಳ್ಳುತ್ತಿದ್ದ ಹೊಟ್ಟೆಪಾಡಿನ ಜನರಿಂದಪರಿಸರ ಉಳಿಯುತಿತ್ತು. ಈಗ ನೆಲೆಸಿರುವ ಕಲುಷಿತ ವಾತಾರಣಕ್ಕೆ ಹೆದರಿ ಅವರು ಹೊರಗಡೆ ಕಾಣಿಸುತ್ತಿಲ್ಲ. ಮಠಗಳಲ್ಲಿರುವ ಮರಿಗಳು (ಶಿಷ್ಯಂದಿರು) ಅವರ ಕೆಲಸ ಮಾಡಲಿ.‌ ಕನಿಷ್ಠ ದೇಶಸೇವೆಯಾದರೂ ಆಗುತ್ತದೆ’ ಎಂದರು.

‘ಜಾತ್ರೆಗಳಲ್ಲಿ ಮುಸ್ಲಿಮರನ್ನು ನಿಷೇಧಿಸುವ ಮೂಲಕ ಬಡವರ ಹೊಟ್ಟೆಗೆ ಒಡೆಯಲಾಗಿದೆ. ಧರ್ಮದ ಮುಖವಾಡದಲ್ಲಿ ಅಧರ್ಮವೇ ನಿರ್ಲಜ್ಜವಾಗಿ ಕುಣಿದು ಕುಪ್ಪಳಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಾಂಸ ತಿನ್ನದವರೇ ಮಾಂಸ ಕತ್ತರಿಸುವುದರ ಬಗ್ಗೆ ಹೆಚ್ಚು ಯಕ್ಷಗಾನ ಮಾಡುತ್ತಿದ್ದಾರೆ. ಹಾಗೆ ಕತ್ತರಿಸಬಾರದು ಹೀಗೆ ಕತ್ತರಿಸಬಾರದು ಎಂದು ಅಪ್ಪಣೆ ಕೊಡಿಸಲು ಇವರು ಯಾರು’ ಎಂದು ಪ್ರಶ್ನಿಸಿದ ಅವರು, ‘ತಿನ್ನೋದೆ ಪ್ರಾಣಿ ವಧೆ ಮಾಡಿ, ಮಾನವತೆ ಪ್ರಶ್ನೆ ಎಲ್ಲಿ’ ಎಂದರು.

‘ಹಿಜಾಬ್‌ ಕುರಿತ ತೀರ್ಪಿಗೆ ವಿರುದ್ಧವಾಗಿ ಈಚೆಗೆ ಮುಸ್ಲಿಂ ಸಂಘಟನೆಗಳ ಒಕ್ಕೂಟ ಮಾಡಿದ ಬಂದ್ ನಾಡಿಗೆ ಮಾದರಿಯಾಗಿತ್ತು’ ಎಂದು ಹೇಳಿದರು. ಕೆ.ಜಿ.ಕೊಪ್ಪಲು, ವಿವಿಧೆಡೆ ಇರುವ ಮುಸ್ಲಿಂ ಸಮುದಾಯದ ವರ್ತಕರಿಂದ ಹಲವರು ಮಾಂಸ ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.