ADVERTISEMENT

ದೇವೇಗೌಡರ ಕುಟುಂಬಕ್ಕೆ ಮಾಟ–ಮಂತ್ರದಲ್ಲಿ ಡಾಕ್ಟರೇಟ್‌ ಕೊಡಲಿ: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2018, 8:33 IST
Last Updated 11 ನವೆಂಬರ್ 2018, 8:33 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

ದಾವಣಗೆರೆ: ಕಣ್ಣೀರು ಹಾಕುವುದರಲ್ಲಿ ಹಾಗೂ ಮಾಟ-ಮಂತ್ರ ಮಾಡಿಸುವುದರಲ್ಲಿ ತಜ್ಞರಾಗಿರುವ ‘ದೇವೇಗೌಡ ಆ್ಯಂಡ್ ಸನ್ಸ್‌’ಗೆ ಡಾಕ್ಟರೇಟ್ ಪದವಿ ಕೊಡಬೇಕು ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದರು.

‘ಅಧಿಕಾರಕ್ಕಾಗಿ ಹಾಗೂ ತಮ್ಮ ಕುಟುಂಬದ ಅಭಿವೃದ್ಧಿಗಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಹಾಗೂ ಅವರ ಮಕ್ಕಳು ದೇವಸ್ಥಾನ, ಮಾಟ-ಮಂತ್ರದ ಮೊರೆ ಹೋಗುತ್ತಿದ್ದಾರೆ. ಈ ವಿಚಾರದಲ್ಲಿ ಅವರು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದಾರೆ’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

‘ಮುಖ್ಯಂತ್ರಿಯಾದ ಬಳಿಕ ಎಚ್.ಡಿ. ಕುಮಾರಸ್ವಾಮಿ ದೇವಸ್ಥಾನ ಸುತ್ತಿದರೇ ಹೊರತು ಜನರ ಸಂಕಷ್ಟಗಳನ್ನು ಅರಿಯಲು ರಾಜ್ಯ ಪ್ರವಾಸ ಕೈಗೊಳ್ಳಲಿಲ್ಲ. ಜ್ಯೋತಿಷಿಯೊಬ್ಬರ ಮಾತು ಕೇಳಿಕೊಂಡು ಲೋಕೋಪಯೋಗಿ ಸಚಿವ ರೇವಣ್ಣ ಅವರು ನಿರ್ದಿಷ್ಟ ಸರ್ಕಾರಿ ಬಂಗಲೆ ಸಿಗುವರೆಗೂ ಹಾಸನದಿಂದೇ ಬೆಳಿಗ್ಗೆ ಎದ್ದು ಕೈಯಲ್ಲಿ ಲಿಂಬೆಹಣ್ಣು ಹಿಡಿದು ವಿಧಾನಮಂಡಲದ ಅಧಿವೇಷನಕ್ಕೆ ಬರುತ್ತಿದ್ದರು. ಈ ಕುಟುಂಬದವರು ರಾಜ್ಯದ ಜನರ, ರೈತರ ಹಿತಕ್ಕಾಗಿ ಮಾಟ–ಮಂತ್ರವನ್ನೇನೂ ಮಾಡಿಸಿಲ್ಲ’ ಎಂದು ಜರೆದರು.

ADVERTISEMENT

‘ಯಾರೋ ನಿಮ್ಮಂಥ ಸ್ವಾಮಿಗಳೇ ಮಾಟ–ಮಂತ್ರ ಮಾಡಿಕೊಡುತ್ತಿರಬೇಕು’ ಎಂದು ಪತ್ರಕರ್ತರು ರೇಣುಕಾಚಾರ್ಯರ ಕಾಲೆಳೆದಾಗ, ‘ನಾವು ಅಂಥ ಕೆಟಗೆರಿಯ ಸ್ವಾಮಿಯಲ್ಲ; ನಾವೂ ದೇವರನ್ನು ನಂಬುತ್ತೇವೆ’ ಎಂದು ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.