ADVERTISEMENT

ಜಮಖಂಡಿಯ ದೇವೇಗೌಡ ಬ್ಯಾರೇಜ್ ಜಲಾವೃತ

ಆರ್.ಎಸ್.ಹೊನಗೌಡ
Published 9 ಆಗಸ್ಟ್ 2020, 8:16 IST
Last Updated 9 ಆಗಸ್ಟ್ 2020, 8:16 IST
ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗುಹೇಶ್ವರ ಗಡ್ಡಿಗೆ ತಹಶೀಲ್ದಾರ್ ಭೇಟಿ ನೀಡಿ ಬೋಟ್ ಪರಿಶೀಲನೆ ಮಾಡಿದರು
ಜಮಖಂಡಿ ತಾಲ್ಲೂಕಿನ ಕಂಕಣವಾಡಿ ಗುಹೇಶ್ವರ ಗಡ್ಡಿಗೆ ತಹಶೀಲ್ದಾರ್ ಭೇಟಿ ನೀಡಿ ಬೋಟ್ ಪರಿಶೀಲನೆ ಮಾಡಿದರು   

ಜಮಖಂಡಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣೆ ಮೈದುಂಬಿದ್ದಾಳೆ.ಸ್ಥಳೀಯರ ಸಂತಸ ಇಮ್ಮಡಿಯಾಗಿದೆ. ಜೊತೆಗೆ ದಿನೇ ದಿನೇ ನದಿಯಲ್ಲಿ ಹೆಚ್ಚುತ್ತಿರುವ ನೀರಿನಮಟ್ಟ ತಾಲ್ಲೂಕಿನ ಕೆಲ ಭಾಗದಲ್ಲಿ ಪ್ರವಾಹ ಭೀತಿ ಸೃಷ್ಟಿಸಿದೆ.

ಸಮೀಪದ ಹಿಪ್ಪರಗಿ ಜಲಶಯದ ಗರಿಷ್ಠ ನೀರಿನ ಮಟ್ಟ 523.25 ಮೀಟರ್ ಇದೆ. ಒಟ್ಟು 2.67 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಈಗಾಗಲೇ ಜಲಾಶಯದಲ್ಲಿ 1.75 ಲಕ್ಷ ಕ್ಯೂಸೆಕ್ ಒಳಹರಿವು, ಅಷ್ಟೇ ಪ್ರಮಾಣದ ನೀರನ್ನು ಹೊರಬಿಡುತ್ತಿದ್ದಾರೆ.

ತಾಲ್ಲೂಕಿನ ಜಂಬಗಿ ಕ್ರಾಸ್‌ನಿಂದ ಶೂರ್ಪಾಲಿ ರಸ್ತೆಯ ಮಧ್ಯದಲ್ಲಿ ಇರುವ ದೇವೇಗೌಡ ಬ್ಯಾರೇಜ್ ಸಂಪೂರ್ಣ ಜಲಾವೃತ್ತವಾಗಿ ಸಂಪರ್ಕ ಕಡಿತವಾಗಿದೆ.

ADVERTISEMENT

ಬಾರದ ನೋಡಲ್ ಅಧಿಕಾರಿಗಳು: ಪ್ರವಾಹ ಪೀಡಿತ 21 ಗ್ರಾಮಗಳಿಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಸೂಕ್ಷ್ಮ ಸ್ಥಳಗಳಿಗೆ ಹೋಗಿ ಬಂದರೂ ನೋಡಲ್ ಅಧಿಕಾರಿಗಳು ಇತ್ತ ಸುಳಿದಿಲ್ಲ. ನೋಡಲ್ ಅಧಿಕಾರಿಗಳು ಯಾರಿದ್ದಾರೆ ಎಂಬುದೇ ಗ್ರಾಮಸ್ಥರಿಗೆ ಇನ್ನೂ ಗೊತ್ತಿಲ್ಲ.

ಪರಿಹಾರ ಸಿಗದ ಸ್ಥಳ: ಆಲಮಟ್ಟಿ ಜಲಾಶಯದ ಎತ್ತರ 519 ಮೀಟರ್‌ಗೆ ಹೆಚ್ಚಿಸಿದಾಗ ಮುಳುಗಡೆಯಾದ ಮುತ್ತೂರು ನಡುಗಡ್ಡೆಯ ಸುಮಾರು 150 ಎಕರೆ ಜಮೀನಿಗೆ ಸರ್ಕಾರದಿಂದ ಇನ್ನೂ ಪರಿಹಾರ ನೀಡಿಲ್ಲ. ಅಧಿಕಾರಿ ಗಳು ಅವೈಜ್ಞಾನಿಕವಾಗಿ ಸಮೀಕ್ಷೆ ಮಾಡಿದ ಕಾರಣ ಈ ಸಮಸ್ಯೆ ಎದುರಾಗಿ ದೆ ಎಂದು ಸ್ಥಳೀಯರು ಹೇಳುತ್ತಾರೆ.

‘ಮಹಾರಾಷ್ಟ್ರದಿಂದ ಮಳೆಯ ನೀರು ರಭಸವಾಗಿ ಹರಿದು ಬರುತ್ತಿದೆ. ಮಣ್ಣಿನಿಂದ ಕೂಡಿದೆ. ಈ ಕಲುಷಿತ ನೀರನ್ನು ಬಳಸುವ ನದಿ ತೀರದ ಜನರು ಕಾಯಿಸಿ, ಸೋಸಿ ಕುಡಿಯಬೇಕು. ಮಿತವಾಗಿ ಬಳಕೆ ಮಾಡಬೇಕು. ನೀರಿನ ರಭಸ ಜೋರಾಗಿರುವುದರಿಂದ ಸಾರ್ವಜನಿಕರು ನದಿಗೆ ಇಳಿಯಬಾರದು ಎಂದು ಸುತ್ತಲಿನ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ’ ಎಂದು ಸಿಪಿಐ ಡಿ.ಕೆ.ಪಾಟೀಲ ತಿಳಿಸಿದರು. ಯಾವ ಸಮಯದಲ್ಲಿ ಪ್ರವಾಹ ಬಂದರೂ ಅದನ್ನು ಎದುರಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಿದೆ.

‘ಈಗಾಗಲೇ ಮುತ್ತೂರು, ಕಂಕಣವಾಡಿ ನಡುಗಡ್ಡೆಗಳಿಗೆ ತೆರಳಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಪ್ರವಾಹ ಪೀಡಿತ ಗ್ರಾಮಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿ ನೇಮಕ ಮಾಡಲಾಗಿದೆ’ ಎಂದು ತಹಶೀಲ್ದಾರ್ ಸಂಜಯ ಇಂಗಳೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.