ADVERTISEMENT

ಧರ್ಮಸ್ಥಳ: ಡಿಸೆಂಬರ್ 2ರಿಂದ ಲಕ್ಷ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:01 IST
Last Updated 19 ನವೆಂಬರ್ 2018, 20:01 IST

ಉಜಿರೆ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತೀಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ಡಿಸೆಂಬರ್ 2 ರಿಂದ 6ರ ವರೆಗೆ ನಡೆಯಲಿವೆ.

ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನ: ಸರ್ವಧರ್ಮ ಸಮ್ಮೇಳನದ 86ನೇ ಅಧಿವೇಶನವನ್ನು ಡಿ. 5 ರಂದು ಸಂಜೆ 5 ಗಂಟೆಗೆ ಗುಜರಾತ್‌ನ ದ್ವಾರಕ ಸೂರ್ಯಪೀಠದ ಕೃಷ್ಣದೇವನಂದಗಿರಿ ಉದ್ಘಾಟಿಸುವರು. ಬೆಂಗಳೂರಿನ ಶಿಕ್ಷಣ ತಜ್ಞ ಎಂ. ಮಮ್ತಾಜ್ ಅಲಿ ಅಧ್ಯಕ್ಷತೆ ವಹಿಸುವರು.

ಮಾಜಿ ಶಾಸಕ ಜೆ.ಆರ್ ಲೋಬೊ, ಸೂಫಿ ಸಂತ ಇಬ್ರಾಹಿಂ ಸುತಾರ ಮತ್ತು ಚಲನಚಿತ್ರ ಕಲಾವಿದ ಬೆಂಗಳೂರಿನ ಶ್ರೀಧರ್‌ ಉಪನ್ಯಾಸ ನೀಡುವರು. ಚೆನ್ನೈನ ಟಿ.ಎಂ ಕೃಷ್ಣ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವಿದೆ.

ADVERTISEMENT

ಡಿ. 6 ರಂದು ಸಾಹಿತ್ಯ ಸಮ್ಮೇಳನದ 86 ನೇ ಅಧಿವೇಶನ ನಡೆಯಲಿದೆ.

ರಾತ್ರಿ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ನಡೆಯಲಿದೆ. ಕೆಎಸ್ಆರ್‌ಟಿಸಿಯು ವಿವಿಧ ಊರುಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದೆ. ಡಿ.2 ರಿಂದ 6 ವರೆಗೆ ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಆಯೋಜಿಸಿದ್ದು ಉಚಿತ ಪ್ರವೇಶ ಇರುತ್ತದೆ.

ಶೌಚಾಲಯ ಸ್ವಚ್ಛಗೊಳಿಸಿದ ಶಿಕ್ಷಕರು

ಕೊರಟಗೆರೆ: ಶಿಕ್ಷಕರು ತಮ್ಮ ಶಾಲೆಯಲ್ಲಿನ ಶೌಚಾಲಯಗಳನ್ನು ಸ್ವತಃ ಸ್ವಚ್ಛಗೊಳಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಮೂಲಕ, ಸೋಮವಾರ ವಿಶ್ವ ಶೌಚಾಲಯ ದಿನ ಆಚರಿಸಿದರು.

ಇಂಥ ದೃಶ್ಯ ಕಂಡು ಬಂದಿದ್ದು ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕರಕಲಘಟ್ಟ ಗ್ರಾಮದಲ್ಲಿ. ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಡಿ.ಯಶೋದಾ, ಶಿಕ್ಷಕ ವೇಣುಗೋಪಾಲ್ ಇಂತಹ ವಿನೂತನ ಕಾರ್ಯಕ್ರಮಕ್ಕೆ ಕೈಹಾಕಿದರು. ಶಾಲೆಯಲ್ಲಿನ ಶೌಚಾಲಯಗಳನ್ನು ಬೆಳಿಗ್ಗೆ ಶಾಲೆ ಪ್ರಾರಂಭವಾಗುವ ಮುನ್ನ ಸ್ವಚ್ಛಗೊಳಿಸಿದರು.

ಇದಾದ ನಂತರ ‘ಮನೆಗೊಂದು ಶೌಚಾಲಯ, ಊರಿಗೊಂದು ದೇವಾಲಯ’ ಎಂಬ ಘೋಷಣಾ ಫಲಕದೊಂದಿಗೆ ಮಕ್ಕಳ ಜೊತೆ ಜಾಥಾ ನಡೆಸಿದರು. ಶೌಚಾಲಯಗಳಿದ್ದರೂ ಅವುಗಳನ್ನು ಬಳಸದೆ ಬಯಲು ಶೌಚಕ್ಕೆ ಹೋಗುತ್ತಿರುವ ಹಿರಿಯರಿಗೆ ಸ್ವಚ್ಛತೆ ಹಾಗೂ ಶೌಚಾಲಯದ ಮಹತ್ವ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.