ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂಬ ದೂರು ಆಧರಿಸಿ ವಿಶೇಷ ತನಿಖಾ ತಂಡದ ತನಿಖೆ, ಈ ಕುರಿತು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ವಿಧಾನಸಭೆಯಲ್ಲಿ ಮಂಗಳವಾರ ಸುದೀರ್ಘ ಚರ್ಚೆ ನಡೆಯಿತು.
ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಆರಂಭಿಸಿದ ಚರ್ಚೆಯಲ್ಲಿ ಪಾಲ್ಗೊಂಡ ಸಚಿವರು, ವಿರೋಧ ಮತ್ತು ಆಡಳಿತ ಪಕ್ಷದ ಶಾಸಕರು ‘ತನಿಖೆ ಬೇಗ ಮುಗಿಸಿ; ಸತ್ಯ ಹೊರತನ್ನಿ’ ಎಂದು ಒತ್ತಾಯಿಸಿದರು.
ಚರ್ಚೆ ಆರಂಭಿಸಿ ಬಿಜೆಪಿ ಶಾಸಕ ವಿ.ಸುನಿಲ್ಕುಮಾರ್ ಅವರು, ‘ಎಸ್ಐಟಿ ಮಧ್ಯಂತರ ವರದಿ ಮಂಡಿಸಬೇಕು. ಮುಸುಕುಧಾರಿ ವ್ಯಕ್ತಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಮತ್ತು ಧರ್ಮಸ್ಥಳದ ಹೆಸರು ಕೆಡಿಸಲು ಷಡ್ಯಂತ್ರ ಮಾಡಿದವರನ್ನು ಪತ್ತೆ ಮಾಡಲು ಎಸ್ಐಟಿ–2 ಮೂಲಕ ತನಿಖೆ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ, ಎಸ್.ಸುರೇಶ್ ಕುಮಾರ್, ಕಾಂಗ್ರೆಸ್ನ ಅಶೋಕ ಕುಮಾರ್ ರೈ ಸೇರಿ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಧರ್ಮಸ್ಥಳದ ಪರವಾಗಿ ಮಾತನಾಡಿದರು. ‘ಈ ಪ್ರಕರಣದಲ್ಲಿ ಸತ್ಯ ಹೊರಬರುತ್ತದೆ. ಸುಳ್ಳು ಆರೋಪ ಮಾಡಿರುವವರಿಗೆ ಶಿಕ್ಷೆ ಆಗಲೇಬೇಕು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸುತ್ತಿರುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಭಾವೋದ್ವೇಗದಿಂದ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.