ಬೆಂಗಳೂರು: ‘ಹಡಗುಗಳಿಗೆ ಬಳಸುವ ಡೀಸೆಲ್ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ಜೆಡಿಎಸ್ನ ಮರಿತಿಬ್ಬೇಗೌಡ ಅವರು ಚಿತ್ರಗಳ ಸಹಿತ ಆರೋಪಿಸಿದರು.
ವಿಧಾನಪರಿಷತ್ನಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘ಮನೆಗಳು ಮತ್ತು ಶಾಲೆಗಳ ಬಳಿಯೇ ವಾಹನಗಳಿಗೆ ಲಾರಿಗಳಿಂದ ನೇರವಾಗಿ ಡೀಸೆಲ್ ಭರ್ತಿ ಮಾಡಲಾಗುತ್ತಿದೆ. ಇದು ಅಸುರಕ್ಷಿತವೂ ಹೌದು. ಆಹಾರ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿ ಮಹಾನ್ ಭ್ರಷ್ಟ ಅಧಿಕಾರಿಗಳಿದ್ದಾರೆ. ಇವರಿಂದಾಗಿ ಅಕ್ರಮಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.
‘ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಗೊಂದಿ ಗ್ರಾಮದಲ್ಲಿರುವ ತೈಲ ಕಂಪನಿಗಳ ದಾಸ್ತಾನುಗಳಿಂದ ಬಂಕ್ಗಳಿಗೆ ಸರಬರಾಜು ಮಾಡುವ ಟ್ಯಾಂಕರ್ಗಳಲ್ಲಿ ಬೇಬಿ ಟ್ಯಾಂಕ್ ಅಳವಡಿಸಿ ಅಕ್ರಮಗಳನ್ನು ನಡೆಸಲಾಗಿದೆ. ಆದರೆ, ಇಲಾಖೆಯ ಅಧಿಕಾರಿ ಕುಮಾರ್ ಎನ್ನುವವರು ದೂರು ದಾಖಲಿಸಲು ವಿಳಂಬ ಮಾಡಿದರು. ಇಂತಹ ಅಕ್ರಮಗಳಿಂದ ಪೆಟ್ರೋಲ್ ಡೀಲರ್ಗಳಿಗೂ ಮತ್ತು ಸರ್ಕಾರದ ಬೊಕ್ಕಸಕ್ಕೂ ಅಪಾರ ನಷ್ಟವಾಗುತ್ತಿದೆ’ ಎಂದರು.
‘ಈ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಲಾಗುವುದು’ ಎಂದು ಸಚಿವ ಉಮೇಶ ಕತ್ತಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.