ADVERTISEMENT

ಡಿ.ಕೆ. ಶಿವಕುಮಾರ್ ಬಂಡೆಯಲ್ಲ, ರೈಲಿನ ಎಂಜಿನ್: ಬಿ.ಕೆ. ಹರಿಪ್ರಸಾದ್

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 16:28 IST
Last Updated 16 ಫೆಬ್ರುವರಿ 2026, 16:28 IST
ಬಿ.ಕೆ. ಹರಿಪ್ರಸಾದ್‌
ಬಿ.ಕೆ. ಹರಿಪ್ರಸಾದ್‌   

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬಂಡೆ ಎನ್ನುವುದಕ್ಕಿಂತ ರೈಲಿನ ಎಂಜಿನ್ ಎನ್ನಬೇಕು. ಅವರು ಎಲ್ಲರನ್ನೂ ಎಳೆದುಕೊಂಡು ಹೋಗುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ರೈಲು ಹತ್ತಿರ ಬಂದಾಗ ಜೋರಾಗಿ ಕೂಗುತ್ತದೆ. ಅದೇ ರೀತಿ ಶಿವಕುಮಾರ್ ಬಂದಾಗ ದೊಡ್ಡ ಆರ್ಭಟ ಆಗುತ್ತದೆ’ ಎಂದರು.

‘ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಇಬ್ಬರೂ ಎಂಜಿನ್‌ಗಳು. ಸರ್ಕಾರದಲ್ಲಿ ಸಿದ್ದರಾಮಯ್ಯ ಮುಂದಿರುತ್ತಾರೆ. ಪಕ್ಷದ ಅಧ್ಯಕ್ಷರು ಹಿಂದಿರುತ್ತಾರೆ. ಪಕ್ಷದ ವಿಚಾರ ಬಂದಾಗ ಶಿವಕುಮಾರ್ ಮುಂದಿರುತ್ತಾರೆ’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್‌ನಲ್ಲಿ ನಾಯಕತ್ವ ಗೊಂದಲ ಇಲ್ಲ. ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಗೆ ಎಲ್ಲ ವಿಚಾರಗಳು ಗೊತ್ತಿದೆ. ಹೀಗಾಗಿ, ಹೈಕಮಾಂಡ್ ನಾಯಕರು ಅಸಹಾಯಕರಲ್ಲ’ ಎಂದರು.

ರಾಷ್ಟ್ರಗೀತೆ ಮುಖ್ಯ: ‘ವಂದೇ ಮಾತರಂಗೆ ನಮ್ಮ ವಿರೋಧವಿಲ್ಲ. ಆದರೆ, ರಾಷ್ಟ್ರಗೀತೆಗೆ ಅಪಮಾನ ಬೇಡ. ವಂದೇ ಮಾತರಂ ಬೆಂಗಾಲ್‌ಗೆ ಮಾತ್ರ ಸೀಮಿತ. ಹೀಗಾಗಿ, ರಾಷ್ಟ್ರಗೀತೆ ನಮಗೆ ಮುಖ್ಯ’ ಎಂದರು.

‘ವಂದೇ ಮಾತರಂ ಆನಂದ್ ಮಠದ ಪ್ರಾರ್ಥನೆ. ಅದರಲ್ಲಿ ಏಳು ಕೋಟಿ ಜನರು ಎಂದು ಮಾತ್ರ ಇದೆ. ಆದರೆ, ಜನಗಣಮನ ಇಡೀ ದೇಶಕ್ಕೆ ಅನ್ವಯವಾಗುತ್ತದೆ. ನಮ್ಮ ರಾಷ್ಟ್ರಗೀತೆಯಲ್ಲಿ ದ್ರಾವಿಡ, ಉತ್ಕಲ, ಕಾಶ್ಮೀರ ಎಂದು ಇದೆ. ಆದರೆ, ವಂದೇ ಮಾತರಂಲ್ಲಿ ತುಮಿ ದುರ್ಗೆ, ತುಮಿ ಮಾತಾ ಎಂದು ಇದೆ. ಮೊದಲು ವಂದೇ ಮಾತರಂ ಬಳಿಕ ರಾಷ್ಟ್ರಗೀತೆ ಹಾಡುವುದು ರಾಷ್ಟ್ರಗೀತೆಗೆ ಅಪಮಾನ ಮಾಡಿದಂತೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.