ADVERTISEMENT

ಜೀವನದಲ್ಲಿ 75 ವರ್ಷ ತುಂಬುವುದು ಒಂದು ಮೈಲಿಗಲ್ಲು ಇದ್ದಂತೆ: ಸಿದ್ದರಾಮಯ್ಯ ಸಂತಸ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 7:43 IST
Last Updated 8 ಜುಲೈ 2022, 7:43 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ‘ನನಗೆ 75 ವರ್ಷ ತುಂಬುತ್ತಿರುವುದರಿಂದ ನಮ್ಮ ಪಕ್ಷದವರೇ ಸೇರಿಕೊಂಡು ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ. ಪಕ್ಷದ ಹೊರತಾಗಿ ಯಾರೂ ಮಾಡುತ್ತಿಲ್ಲʼ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ತಮ್ಮ ಅಧಿಕೃತ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಶುಕ್ರವಾರ ಉಪಾಹಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಪಕ್ಷದ ನಾಯಕರೇ ಹುಟ್ಟುಹಬ್ಬ ಆಚರಣೆ ಸಮಿತಿಯಲ್ಲಿದ್ದಾರೆ. ಕಾಂಗ್ರೆಸ್‌ ನಾಯಕರ ಹೊರತಾಗಿ ಯಾರಿಗೂ ಆಹ್ವಾನ ನೀಡಿಲ್ಲ. ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್‌, ಡಿ.ಕೆ. ಶಿವಕುಮಾರ್‌, ಎಂ.ಬಿ. ಪಾಟೀಲ ಸೇರಿದಂತೆ ಪಕ್ಷದ ನಾಯಕರಿಗೇ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆʼ ಎಂದರು.

ಸಮಿತಿಯಲ್ಲಿರುವ ಆರ್‌.ವಿ. ದೇಶಪಾಂಡೆ, ಶಾಮನೂರು ಶಿವಶಂಕರಪ್ಪ, ಕೆ.ಎನ್‌. ರಾಜಣ್ಣ, ಎಚ್‌.ಸಿ. ಮಹದೇವಪ್ಪ, ಬಸವರಾಜ ರಾಯರಡ್ಡಿ ಎಲ್ಲರೂ ಕಾಂಗ್ರೆಸ್‌ ನಾಯಕರೇ. ಪಕ್ಷದ ಹೆಸರಿನಲ್ಲಿ ಕಾರ್ಯಕ್ರಮ ನಡೆದಿದ್ದರೂ, ಇದು ಪಕ್ಷದವರೇ ಮಾಡುತ್ತಿರುವ ಕಾರ್ಯಕ್ರಮ ಎಂದು ಹೇಳಿದರು.

ADVERTISEMENT

‘ಸಿದ್ದರಾಮೋತ್ಸವ ಎಂದು ನಾನಾಗಲೀ, ಸಮಿತಿಯವರಾಗಲೀ ಎಲ್ಲಿಯೂ ಹೇಳಿಕೊಂಡಿಲ್ಲ. ಮಾಧ್ಯಮದವರೇ ಹಾಗೆ ಹೇಳಿರುವುದು. ಜೀವನದಲ್ಲಿ 75 ವರ್ಷ ತುಂಬುವುದು ಒಂದು ಮೈಲಿಗಲ್ಲು ಇದ್ದಂತೆ. ಆ ಕಾರಣದಿಂದ ಎಲ್ಲರೂ ಸೇರಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆʼ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.