ADVERTISEMENT

ಭಾರತ್ ಜೋಡೋಕ್ಕೆ ಹೆಚ್ಚು ಜನ ಕರೆದುಕೊಂಡು ಬಂದು ನಮ್ಮ ಮರ್ಯಾದೆ ಕಾಪಾಡಿ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 15:31 IST
Last Updated 18 ಸೆಪ್ಟೆಂಬರ್ 2022, 15:31 IST
ಭಾರತ್ ಜೋಡೋ
ಭಾರತ್ ಜೋಡೋ   

ಮೈಸೂರು:‘ಭಾರತ್ ಜೋಡೋನಡಿಗೆಯಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಮುಖಂಡರು ಶಕ್ತಿ ಪ್ರದರ್ಶಿಸಬೇಕು.ಮರ್ಯಾದೆ ಕಾಪಾಡಬೇಕು ಎಂದುಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಇಲ್ಲಿನ ಕಾಂಗ್ರೆಸ್ ಭವನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಭಾರತ ಜೋಡೋ’ ಪಾದಯಾತ್ರೆ ಪೂರ್ವ ಸಿದ್ಧತೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಹುಟ್ಟು ಹಬ್ಬ, ಸ್ವಾತಂತ್ರ್ಯ ರ‍್ಯಾಲಿಯಲ್ಲಿ ನಡೆಯಲಿಲ್ಲವೇ? ಮುಖ‌ ತೋರಿಸಿ, ತಿಂಡಿ ತಿಂದು‌ ಹೋದರೆ ಆಗುವುದಿಲ್ಲ. ದಾವಣಗೆರೆಗೆ ಹಿಂದಿನ‌ ದಿನವೇ ಹೋಗಿರಲಿಲ್ಲವೇ? ಪ್ರತಿ ಶಾಸಕರು 10ರಿಂದ 15ಸಾವಿರ ಮಂದಿಯನ್ನು ಕರೆದುಕೊಂಡು ಬರಬೇಕು. ಮರ್ಯಾದೆ ಕಾಪಾಡಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ,‌ ನನ್ನ ಹಾಗೂ ಮುಖಂಡರ ಮರ್ಯಾದೆ ಹೋಗುತ್ತದೆ’ ಎಂದು ಹೇಳಿದರು.

ADVERTISEMENT

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ‘ಭಾರತ್‌ ಜೋಡೋ ಯಾತ್ರೆಯು ಅ.1ರಂದು ಜಿಲ್ಲೆ ಪ್ರವೇಶಿಸಲಿದೆ. ಅ.2ರಂದು ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಕಡಕೊಳದಿಂದ ಮೈಸೂರು ಅರಮನೆ ಆವರಣದವರೆಗೆ ನಡೆಯಲಿದೆ. ಅ.3ರಂದು ಬೆಳಿಗ್ಗೆ 7ರಿಂದ ಮಂಡ್ಯದತ್ತ ತೆರಳಲಿದೆ’ ಎಂದು ಮಾಹಿತಿ ನೀಡಿದರು.

ಎಐಸಿಸಿ ಕಾರ್ಯದರ್ಶಿ, ಮೈಸೂರು ವಿಭಾಗದ ಉಸ್ತುವಾರಿ ಆರ್‌.ಜಾನ್ ಮಾತನಾಡಿದರು.

ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಎಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕೆಪಿಸಿಸಿ ವಕ್ತಾರ ಎಂ‌.ಲಕ್ಷ್ಮಣ, ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಮುಖಂಡರಾದ ಡಾ.ಎಚ್.ಸಿ.ಮಹದೇವಪ್ಪ, ಎಂ.ಶಿವಣ್ಣ, ಕೆ.ವೆಂಕಟೇಶ್, ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಸುಧೀಂದ್ರ, ವಿನಯ್‌ಕುಮಾರ್‌ ಸೊರಕೆ ಇದ್ದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ ಸ್ಚಾಗತಿಸಿದರು. ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.