ಬೆಂಗಳೂರು:ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬೆಂಗಳೂರಿಗೆ ಬಂದ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಅವರ ಕೈಯಲ್ಲಿ ಜೆಡಿಎಸ್ ಬಾವುಟ ಸಹ ಇದ್ದುದಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾದ ವಿಡಿಯೊ ವೈರಲ್ ಆಗಿದೆ.
ಆದರೆ ಇದನ್ನು ಅಷ್ಟಾಗಿ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಇಲ್ಲ, ಅಭಿಮಾನಿಗಳು ಪ್ರೀತಿ ತೋರಿಸಿದಾಗ ಬೇಡ ಎನ್ನಲಾಗದು ಎಂದು ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಪಿರಿಯಾಪಟ್ಟಣದ ಮಾಜಿ ಶಾಸಕ ವೆಂಕಟೇಶ್ ಸಹಿತ ಕೆಲವು ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾಗ ಡಿಕೆಶಿ ಅವರ ವಿಚಾರವೂ ಬಂದಿತ್ತು. ಜೆಡಿಎಸ್ ನೊಂದಿಗಿನ ಸಂಬಂಧ ಕಡಿದುಹೋಗಿದೆ.ಹೀಗಿದ್ದರೂ ಡಿಕೆಶಿ ಕೈಯಲ್ಲಿ ಜೆಡಿಎಸ್ ಬಾವುಟ ಹಿಡಿದಿದ್ದಾರೆ ಎಂದರೆ ಏನೆನ್ನಬೇಕು ಎಂದು ಸಿದ್ದರಾಮಯ್ಯ ಹೇಳುತ್ತಿರುವ ವಿಡಿಯೊ ಭಾನುವಾರ ಸೋರಿಕೆಯಾಗಿತ್ತು. ಇದು ಬಹಳ ಸಂಚಲನ ಮೂಡಿಸಿತ್ತು.
‘ಲಿಂಗಾಯತರು ಯಡಿಯೂರಪ್ಪ ಅವರಿಗೆ ಮೊದಲಿನಂತೆ ರೀತಿ ಇರುವುದಿಲ್ಲ. ಒಕ್ಕಲಿಗರು ಕುಮಾರಸ್ವಾಮಿಗೆ ಮೊದಲಿನಂತೆ ಇರುವುದಿಲ್ಲ.ಈ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಕಾಂಗ್ರೆಸ್ಸಿಗರಿಗೆ ಗೊತ್ತಿಲ್ಲ. ಡಿ.ಕೆ ಶಿವಕುಮಾರ್ ಮೆರವಣಿಗೆ ಬರುವ ವೇಳೆ ಜೆಡಿಎಸ್–ಕಾಂಗ್ರೆಸ್ ಬಾವುಟ ಹಿಡಿದುಕೊಂಡು ಬರುತ್ತಾರೆ ಎಂದರೆ ಏನರ್ಥ? ಜೆಡಿಎಸ್ ಜೊತೆ ಯಾವುದೇ ಸಂಬಂಧ ಇಲ್ಲ ಎಂದು ನಾನು ಈಗಾಗಲೇ ಘೋಷಿಸಿದ್ದೇನೆ,’ ಎಂದು ಸಿದ್ದರಾಮಯ್ಯ ಅವರು ಆ ವಿಡಿಯೊದಲ್ಲಿ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನಲ್ಲಿ ಮತ್ತೊಂದು ಸುತ್ತಿನ ಒಳಬೇಗುದಿ ಆರಂಭವಾಗಿದೆ ಎಂಬ ಭಾವನೆ ಬಂದಿತ್ತು. ವಿಮಾನನಿಲ್ದಾಣದಲ್ಲಿ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಡಿಕೆಶಿ ಅವರನ್ನು ಸ್ವಾಗತಿಸಿದ್ದು ಕಾಙಗ್ರೆಸ್ ನಾಯಕರಿಗೆ ಅದರಲ್ಲೂ ಮುಖ್ಯವಾಗಿ ಸಿದ್ದರಾಮಯ್ಯ ಅವರಿಗೆ ನುಂಗಲಾರದ ತುತ್ತು ಎಂದು ಹೇಳಲಾಗುತ್ತಿದೆ.
ನಂಜಾವಧೂತ ಸ್ವಾಮಿ ಹೇಳಿಕೆಯ ಬಿಸಿ
ಶಿವಕುಮಾರ್ ಒಕ್ಕಲಿಗ ಸಮುದಾಯದ ಧ್ವನಿ, ಅವರೂ ಮುಖ್ಯಮಂತ್ರಿ ಆಗಬಹುದು ಎಂದು ಶಿರಾ ಸಮೀಪದ ನಂಜಾವದೂತ ಸ್ವಾಮೀಜಿ ಭಾನುವಾರ ರಾತ್ರಿ ಹೇಳಿದ್ದು ಸಹ ಒಂದಿಷ್ಟು ಸಂಚಲನ ಮೂಡಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.