ADVERTISEMENT

ಕೋವಿಡ್ ‘ವಿಘ್ನ’ ನಿವಾರಣೆಗೆ ಅರಿಸಿನ ಗಣೇಶನ ಆರಾಧನೆ

ಒಂದು ಕೋಟಿ ಜನರನ್ನು ತಲುಪಲು ಯೋಜನೆ ರೂಪಿಸಿದ ಕೆಎಸ್‌ಪಿಸಿಬಿ

ವರುಣ ಹೆಗಡೆ
Published 18 ಆಗಸ್ಟ್ 2021, 20:32 IST
Last Updated 18 ಆಗಸ್ಟ್ 2021, 20:32 IST
ಅರಿಸಿನ ಗಣೇಶ
ಅರಿಸಿನ ಗಣೇಶ   

ಬೆಂಗಳೂರು: ಸರ್ಕಾರವು ಕೋವಿಡ್ ಕಾರಣ ಸಾರ್ವಜನಿಕ ಗಣೇಶೋತ್ಸವಗಳನ್ನು ನಿಷೇಧಿಸಿದೆ. ಹಾಗಾಗಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (ಕೆಎಸ್‌ಪಿಸಿಬಿ) ಈ ಬಾರಿ ಪ್ರತಿಮನೆಯಲ್ಲಿಯೂ ಅರಿಸಿನ ಗಣೇಶನ ಆರಾಧನೆ ಉತ್ತೇಜಿಸಲು ಮುಂದಾಗಿದೆ.

‘ಪ್ಲಾಸ್ಟರ್ ಆಫ್ ಪ್ಯಾರಿಸ್‌’ನಿಂದ (ಪಿಒಪಿ) ತಯಾರಿಸಿದ ಗಣೇಶ ವಿಗ್ರಹಗಳ ಮಾರಾಟವನ್ನು ನಿಷೇಧಿ ಸಿದ್ದರೂ ಇದಕ್ಕೆ ಪೂರ್ಣ ‍ಪ್ರಮಾಣದಲ್ಲಿ ಕಡಿವಾಣ ಹಾಕಲು ಮಂಡಳಿಗೆ ಇಷ್ಟು ವರ್ಷ ಸಾಧ್ಯವಾಗಿರಲಿಲ್ಲ. ಹೀಗಾ ಗಿಯೇ ಪ್ರತಿವರ್ಷ ಹಬ್ಬ ಮುಗಿಯುತ್ತಿ ದ್ದಂತೆ ಪಿಒಪಿ ಗಣೇಶ ವಿಗ್ರಹಗಳು ನಗರದ ವಿವಿಧ ಕೆರೆಗಳನ್ನು ಸೇರಿ, ಜಲ ಮೂಲವನ್ನು ಕಲುಷಿತಗೊಳಿಸುತ್ತಿದ್ದವು. ಪರಿಸರಸ್ನೇಹಿ ಗಣೇಶನ ಆರಾಧನೆ ಬಗ್ಗೆ ಜಾಗೃತಿ ಅಭಿಯಾನಗಳನ್ನು ನಡೆಸಿದರೂ ಅದು ಆಚರಣೆಯಲ್ಲಿ ಸಾಕಾರವಾಗಿರಲಿಲ್ಲ.

ಸರ್ಕಾರವು ಕಳೆದ ವರ್ಷ ಕೂಡ ಗಣೇಶೋತ್ಸವಕ್ಕೆ ನಿರ್ಬಂಧ ವಿಧಿಸಿ, ಜನರು ಒಂದೆಡೆ ಗುಂಪಾಗಿ ಸೇರದಂತೆ ಸೂಚಿಸಿತ್ತು. ಇದರಿಂದಾಗಿ ಪಿಒಪಿ (ಪ್ಲಾಸ್ಟರ್‌ ಆಫ್ ಪ್ಯಾರಿಸ್‌) ಗಣೇಶ ವಿಗ್ರಹಗಳು ಅಷ್ಟಾಗಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿಲ್ಲ. ಮಣ್ಣಿನ ವಿಗ್ರಹಗಳ ಪ್ರತಿಷ್ಠಾಪನೆಗೆ ಪ್ರೋತ್ಸಾಹಿಸಲಾಗಿತ್ತು. ‘ಅರಿಸಿನ ಗಣೇಶ’ ಅಭಿಯಾನ ನಡೆಸಿದ್ದ ಮಂಡಳಿಯು, ಪರಿಸರ ಸ್ನೇಹಿ ವಿಗ್ರಹಗಳ ಆರಾಧನೆ ಬಗ್ಗೆ ಜಾಗೃತಿ ಮೂಡಿಸಿತ್ತು. ಇದರಿಂದಾಗಿ ಹಬ್ಬಕ್ಕೂ ಮೊದಲು ಶೇ 6ರಷ್ಟಿದ್ದ ನಿಯಂತ್ರಿತ ತ್ಯಾಜ್ಯ ನಿರ್ವಹಣೆಗೆ ಬಳಸುವ ನೀರಿನ ಗುಣಮಟ್ಟ (ಇ), ವಿಗ್ರಹಗಳ ವಿಸರ್ಜನೆ ಬಳಿಕ ಶೇ 5ಕ್ಕೆ ಇಳಿಕೆಯಾಗಿತ್ತು.

ADVERTISEMENT

ಕೋಟಿ ಜನ ತಲುಪುವ ಗುರಿ: ಈ ಬಾರಿ ಪರಿಸರ ಸ್ನೇಹಿ ಗಣೇಶನ ಆರಾಧನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಲು ಮಂಡಳಿ ಮುಂದಾಗಿದೆ. ಒಂದು ಕೋಟಿ ಜನರನ್ನು ತಲುಪುವ ಗುರಿ ಹಾಕಿಕೊಂಡಿದೆ. ಅರಿಸಿನ ಗಣೇಶ ವಿಗ್ರಹದ ಪ್ರಯೋಜನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ ಪ್ರಾರಂಭಿಸಲು ಯೋಜನೆ ರೂಪಿಸಿದ್ದು, ಇದಕ್ಕಾಗಿ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಡಿಜಿಟಲ್ ಪರದೆಗಳಲ್ಲಿ ಅರಿವು ಮೂಡಿಸಲಾಗುತ್ತದೆ.

‘ಹಾಲಿನ ಪ್ಯಾಕೆಟ್‌ಗಳು, ಅಗರಬತ್ತಿ ಪೊಟ್ಟಣಗಳು, ಬಸ್‌ ಟಿಕೆಟ್‌ಗಳು ಸೇರಿದಂತೆ ವಿವಿಧಡೆ ಅರಿಸಿನ ಗಣೇಶ ಆರಾಧನೆಯ ಬಗ್ಗೆ ಸಂದೇಶ ಸಾರಲಾಗುತ್ತದೆ. ಅರಿಸಿನ ವಿಗ್ರಹ ತಯಾರಿಸಿದವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಪೋಸ್ಟ್‌ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ವಿವಿಧ ಕ್ಷೇತ್ರಗಳ ಗಣ್ಯರಿಂದ ಕೂಡ ಜಾಗೃತಿ ಮೂಡಿಸಲಾಗುತ್ತದೆ. ಇದು ನೀರಿನಲ್ಲಿ ಸುಲಭವಾಗಿ ಕರಗಲಿದ್ದು, ಮನೆಯಲ್ಲಿಯೇ ವಿಸರ್ಜಿಸಬಹುದು’ ಎಂದು ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಸುರೇಶ್ ಮಧುಸೂದನ್ ತಿಳಿಸಿದರು.

ಅರಿಸಿನ ಗಣೇಶ ವಿಗ್ರಹ ತಯಾರಿ ಹೇಗೆ?

*ಅರಿಸಿನ ಪುಡಿಗೆ ಮೈದಾ, ಅಕ್ಕಿ ಅಥವಾ ರಾಗಿ ಹಿಟ್ಟಿನಲ್ಲಿ ಯಾವುದಾದರೂ ಒಂದನ್ನು ಸಮಾನವಾಗಿ ಮಿಶ್ರಣ ಮಾಡಿಕೊಳ್ಳುವುದು

*7ರಿಂದ 8 ಚಮಚದಷ್ಟು ಸಕ್ಕರೆ ಪುಡಿ ಸೇರಿಸುವುದು

*ಮಿಶ್ರಣ ಹದ ಮಾಡಿಕೊಳ್ಳಲು ಬೇಕಾದಷ್ಟು ನೀರು ಬಳಸುವುದು

*ವಿಗ್ರಹಕ್ಕೆ ಕಣ್ಣಿನ ರೂಪದಲ್ಲಿಮೆಣಸಿನ ಕಾಳುಗಳನ್ನು ಅಳವಡಿಸುವುದು

*ವಿಗ್ರಹ ತಯಾರಿಸಿದ ಬಳಿಕಹೂವಿನ ಮೂಲಕ ಅಲಂಕಾರ ಮಾಡುವುದು

ಅರಿಸಿನ ಹೇರಳವಾದ ಔಷಧ ಗುಣ ಹೊಂದಿದೆ. ಕೋವಿಡ್‌ ಸಂದರ್ಭದಲ್ಲಿ ಅದರ ಮಹತ್ವ ಎಲ್ಲರ ಅರಿವಿಗೆ ಬರುತ್ತಿದೆ. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಲು ಅಭಿಯಾನ ಕೈಗೊಳ್ಳಲಾಗುತ್ತಿದೆ.

- ಸುರೇಶ್ ಮಧುಸೂದನ್, ಕೆಎಸ್‌ಪಿಸಿಬಿ ಹಿರಿಯ ಪರಿಸರ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.