ADVERTISEMENT

ರಾಹುಲ್ ಪರಿಸರ ಕಾಳಜಿ BJP ಆಡಳಿತವಿರುವ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆಯೇ?:ಅಶೋಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜುಲೈ 2025, 12:45 IST
Last Updated 19 ಜುಲೈ 2025, 12:45 IST
   

ಬೆಂಗಳೂರು: ಸುರಂಗ ರಸ್ತೆ ಯೋಜನೆ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಗುರಿಯಾಗಿಸಿ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ನಾಯಕ ಆರ್‌.ಅಶೋಕ, ಇದು ಪರಿಸರಕ್ಕೆ ಹಾನಿಯುಂಟು ಮಾಡುವುದಲ್ಲದೇ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ ಎಂದಿದ್ದಾರೆ.

ಈ ಕುರಿತ ಮಾಧ್ಯಮ ವರದಿಯೊಂದನ್ನು ಹಂಚಿಕೊಂಡು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಈ ಯೋಜನೆಯ ಮೂಲಕ ರಾಜ್ಯ ಕಾಂಗ್ರೆಸ್‌ ಸರ್ಕಾರವು ನಗರದ ಅತ್ಯಂತ ಪ್ರಸಿದ್ಧ ಪಾರಂಪರಿಕ ವಲಯಗಳಾದ ಲಾಲ್‌ಬಾಗ್, ಅರಮನೆ ಮೈದಾನ, ಸೇಂಟ್ ಜಾನ್ಸ್ ಆಸ್ಪತ್ರೆ, ರೇಸ್ ಕೋರ್ಸ್ ಮತ್ತು ಹೆಬ್ಬಾಳದ ಅಂದವನ್ನು ಕೆಡಿಸಲು ಮುಂದಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ಈ ವಿಷಯದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಮೌನ ಪ್ರಶ್ನಿಸಿದ ಅವರು, ‘ರಾಹುಲ್ ಗಾಂಧಿ ಅವರ ಪರಿಸರ ಕಾಳಜಿ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆಯೇ’ ಎಂದು ಕೇಳಿದ್ದಾರೆ.

‘ಮಹಾರಾಷ್ಟ್ರದ ಆರೆ ಮತ್ತು ಛತ್ತೀಸಗಢದ ಹಸ್ದಿಯೋ ಅರಣ್ಯ ವಿಚಾರವಾಗಿ ಪರಿಸರ ಕಾಳಜಿಯ ಬಗ್ಗೆ ಗದ್ದಲ ಎಬ್ಬಿಸಿದ ಇದೇ ರಾಹುಲ್ ಗಾಂಧಿ ಇಂದು ಅವರ ಸ್ವಂತ ಪಕ್ಷದ ಉಪ ಮುಖ್ಯಮಂತ್ರಿ ಬೆಂಗಳೂರಿನ ಪರಿಸರವನ್ನು ಹಾಳು ಮಾಡುತ್ತಿರುವಾಗ ತಮಗೆ ಸಂಬಂಧವಿಲ್ಲ ಎನ್ನುವ ಹಾಗೆ ನಟಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.

‘ಇದು ಅಭಿವೃದ್ಧಿಯಲ್ಲ. ಮೂಲಸೌಕರ್ಯ ಹೆಸರಿನಲ್ಲಿ ನಡೆಸುತ್ತಿರುವ ಪರಿಸರ ವಿಧ್ವಂಸಕ ಕೃತ್ಯ’ ಎಂದು ಹೇಳಿದ್ದಾರೆ.

‘ಈ ₹17,698 ಕೋಟಿ ವೆಚ್ಚದ ಯೋಜನೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಏನಾದರೂ ಪಾಲಿದೆಯೇ’ ಎಂದು ಕೇಳಿದ್ದಾರೆ.

ಬೆಂಗಳೂರಿನ ಜನರಿಗೆ ಬೇಕಾಕಿರುವುದು ಸುರಂಗವಲ್ಲ. ಬದಲಾಗಿ ಶುದ್ಧ ಗಾಳಿ, ಹಸಿರು ಪರಿಸರ ಮತ್ತು ಉತ್ತಮ ಸಾರಿಗೆ ವ್ಯವಸ್ಥೆ ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.