ಶಿವಮೊಗ್ಗ: 'ಚಡ್ಡಿಯ (ಆರ್ಎಸ್ಎಸ್) ಸಹವಾಸಕ್ಕೆ ಬಂದರೆ ಕಾಂಗ್ರೆಸ್ ಸುಟ್ಟು ಹೋಗುವುದು ಗ್ಯಾರಂಟಿ. ಚಡ್ಡಿಗೆ ಬೆಂಕಿ ಹಚ್ಚಿ ನೋಡಿ ಹನುಮಂತ ಲಂಕೆ ಸುಟ್ಟ ಹಾಗೆ ನಿಮ್ಮ ಪಕ್ಷದ ಬುಡವೇ ಸುಟ್ಟು ಬೂದಿಯಾಗಲಿದೆ' ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಮೇಲಿನಂತೆ ತಿರುಗೇಟು ನೀಡಿದರು.
ಚಡ್ಡಿ ನಿಷೇಧ ಮಾಡಲು ಹೊರಟ ಇಂದಿರಾಗಾಂಧಿ ಪ್ರಧಾನ ಮಂತ್ರಿ ಪದವಿ ಕಳೆದುಕೊಂಡರು. ರಾಹುಲ್ ಗಾಂಧಿ ಸೋಲುವ ಆತಂಕದಿಂದ ಉತ್ತರ ಪ್ರದೇಶ ಬಿಟ್ಟು ಮುಸ್ಲಿಂ ಬಾಹುಳ್ಯವಿರುವ ಕೇರಳದಿಂದ ಗೆದ್ದು ಬಂದರು. ಆರ್.ಎಸ್.ಎಸ್. ಚಡ್ಡಿ ಸುದ್ದಿಗೆ ಬಂದರೆ ಹುಷಾರ್. ನಿಮ್ಮ ಈ ಪ್ರಚಾರದ ಹುಚ್ಚಾಟಕ್ಕೆ ಎಲ್ಲೂ ಔಷಧಿ ಇಲ್ಲ. ಹುಚ್ಚ ಸಿದ್ಧರಾಮಯ್ಯನವೇ ನಿಮ್ಮ ಈ ಹುಚ್ಚು ಹೇಳಿಕೆಗಳನ್ನು ನಿಲ್ಲಿಸಿ ಎಂದು ತಾಕೀತು ಮಾಡಿದರು.
ದೇಶದ ಪ್ರಧಾನಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ ಸೇರಿದಂತೆ ಸಾವಿರಾರು ಗಣ್ಯರು ಆರ್ಎಸ್ಎಸ್ ಮೂಲದಿಂದ ಬಂದವರು. ಆರ್.ಎಸ್.ಎಸ್. ಚಡ್ಡಿ ಪ್ರಭಾವ ಸಿದ್ಧರಾಮಯ್ಯನಿಗೆ ಏನು ಗೊತ್ತು? ಇಡೀ ವಿಶ್ವವೇ ಒಂದು ಕುಟುಂಬ ಎಂಬ ಭಾತೃತ್ವ ಭಾವನೆ ಮೂಡಿಸಿದವರೇ ಆರ್ಎಸ್ಎಸ್ನವರು ಎಂದು ಈಶ್ವರಪ್ಪ ಹೇಳಿದರು.
’ಈಗಾಗಲೇ ಜನ ನಿಮ್ಮನ್ನು ಮೂಲೆಗುಂಪು ಮಾಡಿದ್ದಾರೆ. ನಿಮಗೆ ಸೋನಿಯಾಗಾಂಧಿ ಬುದ್ಧಿ ಹೇಳಲ್ಲ. ರಾಹುಲ್ ಗಾಂಧಿಗೆ ಬುದ್ದಿ ಇಲ್ಲ. ಖರ್ಗೆ ಅವರ ಮಾತು ನೀವು ಕೇಳಲ್ಲ. ಆದ್ದರಿಂದ ನಿಮ್ಮ ಹುಚ್ಚುತನ ಕೇಳುವವರಿಲ್ಲ. ನೀವು ಎಲ್ಲಿಯೇ ಚುನಾವಣೆಗೆ ನಿಂತರೂ ಈ ಚಡ್ಡಿಯೇ ನಿಮ್ಮನ್ನು ಸೋಲಿಸುತ್ತದೆ’ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.