ಕಾರವಾರ: 'ನಿಸರ್ಗ' ಚಂಡಮಾರುತಕ್ಕೆ ಸಿಲುಕಿ ಮುಳುಗುವ ಅಪಾಯದಲ್ಲಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ ಏಳು ಮಂದಿಯನ್ನು ಸಮೀಪದಲ್ಲಿದ್ದ ದೋಣಿಗಳ ಮೀನುಗಾರರು ರಕ್ಷಿಸಿದ್ದಾರೆ.
ದೋಣಿಯು ಗೋವಾದ ವಾಸ್ಕೊ ಬಳಿ ಮಂಗಳವಾರ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿತ್ತು. ಉಡುಪಿ ಜಿಲ್ಲೆ ಮಲ್ಪೆಯ ವಡಭಾಂಡೇಶ್ವರದ ದೀಪಿಕಾ ಎಂಬುವರಿಗೆ ಸೇರಿದ 'ಶ್ರೀದುರ್ಗಾ ಹನುಮ' ಹೆಸರಿನ ದೋಣಿ ಇದಾಗಿದೆ.
'ಚಂಡಮಾರುತದ ರಭಸಕ್ಕೆ ದೋಣಿಯು ನೀರಿನಲ್ಲಿ ಓಲಾಡುತ್ತಿದ್ದ ಸಂದರ್ಭದಲ್ಲೇ ಅದರ ಮುಂಭಾಗದ ಫೈಬರ್ ರಚನೆಯು ಒಡೆಯಿತು. ಇದರಿಂದ ದೋಣಿಯೊಳಗೆ ನೀರು ನುಗ್ಗಲು ಶುರುವಾಯಿತು. ಪಕ್ಕದಲ್ಲೇ ಇದ್ದ ದೋಣಿಗಳ ಮೀನುಗಾರರಿಗೆ ಮಾಹಿತಿ ನೀಡಿದ್ದರಿಂದ ಎಲ್ಲರೂ ಸುರಕ್ಷಿತವಾಗಿ ದಡ ಸೇರಿದರು' ಎಂದು ಮೀನುಗಾರ ನಾಗರಾಜ 'ಪ್ರಜಾವಾಣಿ'ಗೆ ತಿಳಿಸಿದರು.
ಭಟ್ಕಳ ತಾಲ್ಲೂಕಿನ ಕೇಶವ ಮಾದೇವ ಮೊಗೇರ, ನಾಗರಾಜ್ ಈಶ್ವರ ಮೊಗೇರ, ರಾಮಚಂದ್ರ ನಾರಾಯಣ ನಾಯ್ಕ, ಈಶ್ವರ ವೆಂಕಟರಮಣ ಹರಿಕಾಂತ್ರ, ದಿನೇಶ್ ಜಟ್ಟ ಮೊಗೇರ, ಗುರುರಾಜ್ ಮಂಜುನಾಥ ಮೊಗೇರ, ಚಿದಂಬರ ಗಣಪತಿ ಹರಿಕಾಂತ್ರ ಆ ದೋಣಿಯಲ್ಲಿದ್ದರು.
ಸುಮಾರು ₹8 ಲಕ್ಷ ಮೌಲ್ಯದ ಮೀನು, ಡೀಸೆಲ್ ಸಮುದ್ರದಲ್ಲೇ ಚೆಲ್ಲಿಹೋಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.