ಬೆಂಗಳೂರು:‘ಲೋಕಸಭಾ ಚುನಾವಣಾ ದೃಷ್ಟಿಯಿಂದ ಕೇಂದ್ರ ಸರ್ಕಾರ ಮೀಸಲಾತಿ ಸೇರಿದಂತೆ ಕೆಲವು ಪ್ರಮುಖ ನಿರ್ಧಾರಗಳನ್ನು ತಳೆಯುತ್ತಿದೆ. ಚುನಾವಣೆಯ ಬಳಿಕ ಈ ನಿರ್ಧಾರಗಳಿಗೆ ಯಾವುದೇ ಮೌಲ್ಯ ಇರುವುದಿಲ್ಲ’ ಎಂದು ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ವಿಧಿ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯವು ನಗರದಲ್ಲಿ ಗುರುವಾರ ಆಯೋಜಿಸಿದ್ದ‘ರಾಷ್ಟ್ರೀಯ ವಿಚಾರ ಸಂಕಿರಣ’ ಉದ್ಘಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳರ ‘ದೇವೇಗೌಡ ಭಸ್ಮಾಸುರ ಇದ್ದಂತೆ’ ಎಂಬ ಹೇಳಿಕೆಗೆ, ‘ಬಸನಗೌಡರು ಈ ಹಿಂದೆಬಿಜೆಪಿ ಬಿಟ್ಟು ಜೆಡಿಎಸ್ಗೆ ಬಂದಿದ್ದಾಗ ಬಿಜೆಪಿ ಪಕ್ಷದ ನಾಯಕರ ಬಗ್ಗೆ ತುಂಬಾನೇ ಮಾತನಾಡಿದ್ದರು. ಈಗ ಬಿಜೆಪಿಯಲ್ಲಿದ್ದುಕೊಂಡು ನಮ್ಮ ಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ಬಗ್ಗೆ ನಾನೇನು ಮಾತನಾಡಲಿ’ ಎಂದು ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ನಿರ್ಮಿಸಲು ಯೋಜಿಸಿರುವ ಉಕ್ಕಿನ ಸೇತುವೆ ಬಗ್ಗೆ ಕೇಳಿದಾಗ, ‘ಜನರಿಗೆ ಅನುಕೂಲವಾಗುವ ಯೋಜನೆಗಳಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ. ಈ ವಿಷಯದಲ್ಲಿ ನನ್ನ ಮೇಲೆ ಯಾವುದೇ ಒತ್ತಡ ಇಲ್ಲ’ ಎಂದು ತಿಳಿಸಿದರು.
‘ಯಾವುದೇ ಅಡಚಣೆ ಇಲ್ಲದೆ ನಮ್ಮ ಸರ್ಕಾರ ಸುಗಮವಾಗಿ ಐದು ವರ್ಷಗಳನ್ನು ಪೂರೈಸಲಿದೆ. ಅದರಲ್ಲಿ ಯಾರಿಗೂ ಯಾವುದೇ ಅಪನಂಬಿಕೆ ಬೇಡ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.