
ಬೆಂಗಳೂರು: ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲೆ ₹1 ಸೆಸ್ ವಿಧಿಸುವ ಕಾರ್ಮಿಕ ಇಲಾಖೆಯು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.
ಆದರೆ, ಈ ಪ್ರಸ್ತಾವ ಅನುಷ್ಠಾನಕ್ಕೆ ಸೂಕ್ತವಾಗಿಲ್ಲ ಎಂದು ಹೇಳಿರುವ ಆರ್ಥಿಕ ಇಲಾಖೆ, ಪ್ರಸ್ತಾವವನ್ನು ತಿರಸ್ಕರಿಸಿದೆ.
‘ಅಸಂಘಟಿತ ವಲಯದಲ್ಲಿ ಸುಮಾರು 1.30 ಕೋಟಿ ಕಾರ್ಮಿಕರು ಇದ್ದಾರೆ. ಇಂತಹ ಕಾರ್ಮಿಕರ ಕಲ್ಯಾಣ ಹಾಗೂ ಅವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ದೊಡ್ಡ ಮೊತ್ತದ ಸಂಪನ್ಮೂಲದ ಅಗತ್ಯವಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಥೆನಾಲ್ ಮೇಲೆ ಸೆಸ್ ವಿಧಿಸುವುದರಿಂದ ವಾರ್ಷಿಕ ಸುಮಾರು ₹2,120 ಕೋಟಿ ಸಂಗ್ರಹವಾಗುತ್ತದೆ. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳಾದ ಆರೋಗ್ಯ ಸೌಲಭ್ಯ, ಅಪಘಾತ ಪರಿಹಾರ, ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಬಳಸಲಾಗುವುದು’ ಎಂದು ಮುಖ್ಯಮಂತ್ರಿಗೆ ಸಲ್ಲಿಸಿದ ಪ್ರಸ್ತಾವದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿವರಿಸಿದ್ದಾರೆ.
‘ಅಸಂಘಟಿತ ವಲಯಕ್ಕೆ ಪ್ರತ್ಯೇಕ ಸೆಸ್ ಸಂಗ್ರಹಿಸಿದರೆ ಆರೋಗ್ಯ ಸೌಲಭ್ಯಕ್ಕೆ ₹1,772 ಕೋಟಿ ವಿನಿಯೋಗಿಸಲಾಗುವುದು. ಉಳಿದ ಹಣವನ್ನು 62 ಲಕ್ಷ ಕಾರ್ಮಿಕ ಕುಟುಂಬಗಳ ಕಲ್ಯಾಣ ಕಾರ್ಯಗಳಿಗೆ ಬಳಸಲಾಗುವುದು. ಮೃತ ಕಾರ್ಮಿಕರ ಅಂತ್ಯ ಸಂಸ್ಕಾರಕ್ಕೂ ಹಣ ನೀಡಲಾಗುವುದು’ ಎಂದು ಲಾಡ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.