ADVERTISEMENT

ಗಣೇಶ ಹಬ್ಬ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ: ಜಮೀರ್ ವಿರುದ್ಧ ಬಿಜೆಪಿ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಆಗಸ್ಟ್ 2022, 12:20 IST
Last Updated 9 ಆಗಸ್ಟ್ 2022, 12:20 IST
ಜಮೀರ್ ಅಹ್ಮದ್ ಖಾನ್
ಜಮೀರ್ ಅಹ್ಮದ್ ಖಾನ್   

ಬೆಂಗಳೂರು: ಗಣೇಶ ಹಬ್ಬ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಚಾಮರಾಜಪೇಟೆ ಮೈದಾನವು, ದಾಖಲೆ ಪ್ರಕಾರ ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಆದರೂ, ಸ್ಥಳೀಯ ಶಾಸಕರಾದ ಜಮೀರ್ ತಮ್ಮದೇ ಜಾಗ ಎಂದುಕೊಂಡಂತಿದೆ. ಗಣೇಶೋತ್ಸವ ಮಾಡುವಂತಿಲ್ಲ ಎಂಬ ಆಜ್ಞೆ‌ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಿಲುವು ಕೂಡಾ ಇದೇ ಆಗಿದೆಯೇ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಈದ್ಗಾ ಮೈದಾನದಲ್ಲಿ ಇಷ್ಟು ದಿನ ಧ್ವಜಾರೋಹಣ ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ ಜಮೀರ್ ಅಹ್ಮದ್ ಖಾನ್ ಈಗ ಗಣೇಶೋತ್ಸವಕ್ಕೆ ವಿರೋಧಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕೃಪಾಶೀರ್ವಾದದಿಂದ ಚಾಮರಾಜಪೇಟೆಯ ಈದ್ಗಾ ಮೈದಾನ ಅಂದಿನ ಲಾಲ್ ಚೌಕ್ ಆಗಿ ಪರಿವರ್ತನೆಯಾಗುತ್ತಿದೆಯೇ’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಗಣೇಶ ಹಬ್ಬ ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ. ಗಣೇಶೋತ್ಸವದ ಮೂಲಕ ತಿಲಕರು ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದರು. ರಾಷ್ಟ್ರೀಯ ಜೋಡಣೆಗೆ ಬಹುಮುಖ್ಯ ಪಾತ್ರ ವಹಿಸಿದ ಗಣೇಶ ಉತ್ಸವವನ್ನು ಆಚರಿಸುವುದು ಬೇಡ ಎನ್ನಲು ಕಾಂಗ್ರೆಸ್ ನಾಯಕರು ಯಾರು’ ಎಂದು ಬಿಜೆಪಿ ಗುಡುಗಿದೆ.

‘ರಿಪಬ್ಲಿಕ್ ಆಫ್ ಕನಕಪುರದ ಮಾದರಿಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ರಿಪಬ್ಲಿಕ್ ಆಫ್ ಚಾಮರಾಜಪೇಟೆ ಕಟ್ಟಿಕೊಂಡಿದ್ದಾರಾ? ಇದು ಸ್ವತಂತ್ರ ಭಾರತ. ಇಲ್ಲಿ ಪಾಳೆಗಾರಿಕೆ ನಡೆಸಲು ‘ಮೀರ್ ಸಾದಿಕ್’ ಅವರ ಪ್ರೋತ್ಸಾಹ ಇದೆಯೇ’ ಎಂದು ಬಿಜೆಪಿ ಕಿಡಿಕಾರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.