ADVERTISEMENT

ಆಶಯದಂತೆ ಮಣ್ಣಾದ ಕಾರ್ನಾಡ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 4:31 IST
Last Updated 11 ಜೂನ್ 2019, 4:31 IST
2013ರಲ್ಲಿ ಪ್ರಜಾವಾಣಿ ದೀಪಾವಳಿ ವಿಶೇಷಾಂಕಕ್ಕಾಗಿ ನಡೆದ ಸಂವಾದವೊಂದರಲ್ಲಿ ಭಾಗವಹಿಸಿದ್ದ ಸಾಹಿತಿಗಳಾದ ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ದೇವನೂರು ಮಹಾದೇವ ಹಾಗೂ ಯು.ಆರ್.ಅನಂತಮೂರ್ತಿ –ಪ್ರಜಾವಾಣಿ ಚಿತ್ರ
2013ರಲ್ಲಿ ಪ್ರಜಾವಾಣಿ ದೀಪಾವಳಿ ವಿಶೇಷಾಂಕಕ್ಕಾಗಿ ನಡೆದ ಸಂವಾದವೊಂದರಲ್ಲಿ ಭಾಗವಹಿಸಿದ್ದ ಸಾಹಿತಿಗಳಾದ ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ದೇವನೂರು ಮಹಾದೇವ ಹಾಗೂ ಯು.ಆರ್.ಅನಂತಮೂರ್ತಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಹಿರಿಯ ನಾಟಕಕಾರ, ನಟ, ನಿರ್ದೇಶಕ ಗಿರೀಶ ಕಾರ್ನಾಡ (81) ಇಲ್ಲಿನ ಲ್ಯಾವಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಬೆಳಿಗ್ಗೆ 8ರ ವೇಳೆಗೆ ನಿಧನರಾದರು. ಅವರು, ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿದ್ದರು.

ಯಾವುದೇ ಧಾರ್ಮಿಕ ವಿಧಿವಿಧಾನವಿಲ್ಲದೆ ಅಂತ್ಯಕ್ರಿಯೆ ನಡೆಯಬೇಕು ಎಂಬ ಕಾರ್ನಾಡರ ಆಶಯದಂತೆ ಕುಟುಂಬ ಸದಸ್ಯರು ನಡೆದುಕೊಂಡರು. ಮೃತರ ಗೌರವಾರ್ಥ ಸೋಮವಾರ ಸರ್ಕಾರಿ ರಜೆ ಘೋಷಿಸಲಾಗಿತ್ತು. ಜೂನ್‌ 12ರವರೆಗೆ ಶೋಕಾಚರಣೆ ಇರುತ್ತದೆ.

‘ನನ್ನ ದೇಹವನ್ನು ಸಾರ್ವ ಜನಿಕ ದರ್ಶನಕ್ಕೆ ಇಡುವುದು ಬೇಡ, ಗೌರವ ಸಲ್ಲಿಸಲು ಯಾರೂ ಬರುವುದು ಬೇಡ’ ಎಂದು ನಿಧನಕ್ಕೆ ಮೊದಲು ಕುಟುಂಬಸ್ಥರಿಗೆ ಸೂಚಿಸಿದ್ದರು. ಹೀಗಾಗಿ ಅತ್ಯಂತ ಆಪ್ತರಿಗೆ ಬಿಟ್ಟರೆ ಅಭಿಮಾನಿಗಳು, ರಂಗಕರ್ಮಿಗಳು, ರಾಜಕೀಯ ನೇತಾರರಿಗೆ ಅಂತಿಮ ದರ್ಶನ ಸಾಧ್ಯವಾಗಲಿಲ್ಲ.

ADVERTISEMENT

ಪಾರ್ಥಿವ ಶರೀರವನ್ನು ಬೈಯಪ್ಪನಹಳ್ಳಿ ಸಮೀಪದ ಕಲ್ಲಪಳ್ಳಿ ವಿದ್ಯುತ್‌ ಚಿತಾಗಾರಕ್ಕೆ ಮಧ್ಯಾಹ್ನ 1ರ ವೇಳೆಗೆ ತರಲಾಯಿತು. ಸಿನಿಮಾ, ಸಾಹಿತ್ಯ, ನಾಟಕ ಮತ್ತು ರಾಜಕೀಯ ಕ್ಷೇತ್ರಗಳ ಹಲವರು ಅಂತಿಮ ದರ್ಶನ ಪಡೆದರು. ಯಾವುದೇ ಧಾರ್ಮಿಕ ವಿಧಿ ವಿಧಾನಗಳಿಲ್ಲದೆ ಮಧ್ಯಾಹ್ನ 2.20ರ ವೇಳೆಗೆ ಕಾರ್ನಾಡರ ಅಂತ್ಯಸಂಸ್ಕಾರ ನೆರವೇರಿತು.

3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಇರುತ್ತದೆ ಎಂದು ಕುಟುಂಬದವರು ಮೊದಲು ಪ್ರಕಟಿಸಿದ್ದರಿಂದ ರಂಗಭೂಮಿ ಮತ್ತು ಸಿನಿಮಾ, ಸಾಹಿತ್ಯ ಕ್ಷೇತ್ರದ ಹಲವರು ಚಿತಾಗಾರಕ್ಕೆ ಬಂದಿದ್ದರು. ಅಷ್ಟರಲ್ಲಾಗಲೇ ಅಂತ್ಯಸಂಸ್ಕಾರ ಮುಗಿದಿತ್ತು. ಅವರಿಗೆ ಪತ್ನಿ ಸರಸ್ವತಿ, ಪುತ್ರ ರಘು, ಪುತ್ರಿ ಶಾಲ್ಮಲಿ ರಾಧಾ ಇದ್ದಾರೆ.

ಕಾರ್ನಾಡ ಅವರು ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನ (ಬಿಐಸಿ) ಸ್ಥಾಪಕ ಟ್ರಸ್ಟಿ ಆಗಿದ್ದರು.

ಇವುಗಳನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.