ರಾಯಚೂರು: ಮಂಗಳೂರಿನಲ್ಲಿ ಹತ್ಯೆಯಾದ ಹಿಂದೂ, ಮುಸ್ಲಿಂ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ನೀಡುವ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು 'ಪರಿಹಾರ ನೀಡುವ ವಿಚಾರದಲ್ಲಿ ಯಾವುದೇ ತಾರತಮ್ಯ ಇರಬಾರದು. ಎಲ್ಲರೂ ಜೀವಿಗಳು, ಪ್ರಾಣ ಕಳೆದುಕೊಂಡವರೆಲ್ಲ ಸಮಾನರು. ಎಲ್ಲರಿಗೂ ಸೂಕ್ತ ರೀತಿಯ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಕೋರುತ್ತೇನೆ' ಎಂದು ತಿಳಿಸಿದರು.
'ಯಾವುದೇ ರಾಜ್ಯದಲ್ಲಿ ಹತ್ಯೆಯಾದ ವ್ಯಕ್ತಿಯ ಕುಟುಂಬಕ್ಕೆ ಹಣ ನೀಡುವುದು ಪರ್ಯಾಯವಲ್ಲ. ಜೀವ ಮತ್ತು ಹಣ ಎರಡನ್ನೂ ತುಲನೆ ಮಾಡಲಾಗುವುದಿಲ್ಲ.
ಅನುಹುತಕ್ಕೀಡಾದವರ ಕುಟುಂಬದವರು ನಿರ್ಗತಿಕರಾಗಬಾರದು ಎನ್ನುವ ಕಾರಣದಿಂದ ಸರ್ಕಾರಗಳು ಪರಿಹಾರ ನೀಡುವ ಕೆಲಸ ಮಾಡುತ್ತವೆ. ಮೊತ್ತಮೊದಲು ಇಂತಹ ಅನಾಹುತಗಳು ನಡೆಯದಂತೆ ರಕ್ಷಣೆ ನೀಡುವುದು ಸರ್ಕಾರದ ಕರ್ತವ್ಯ' ಎಂದು ತಿಳಿಸಿದರು.
'ಯಾವುದೇ ದೇಶ ಪ್ರಗತಿಯಾಗಲು ಶಾಂತಿ, ಸೌಹಾರ್ದತೆ ಇರಲೇಬೇಕು. ಯಾವುದೇ ಸಮುದಾಯ ಇನ್ನೊಂದು ಸಮುದಾಯದ ಮೇಲೆ ದಬ್ಬಾಳಿಕೆ ಮಾಡುವುದು, ಅತಿಕ್ರಮಣ ಮಾಡುವುದು ಅಥವಾ ಬೆದರಿಕೆ ಹಾಕುವುದು ಸರಿಯಾದ ಕ್ರಮವಲ್ಲ. ಇಂತಹ ಘಟನೆಗೆ ಕಾರಣವಾಗುವವರನ್ನು ಶಾಂತಿಯುತವಾಗಿ ತೀವ್ರವಾಗಿ ವಿರೋಧಿಸುತ್ತೇವೆ' ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.