ಜೇವರ್ಗಿ: ನಗರ ಹೊರವಲಯದಲ್ಲಿರುವ ಮನೆಗೆ ಶುಕ್ರವಾರ ರಾತ್ರಿ ನುಗ್ಗಿದ ಐವರು ಕಳ್ಳರು, ದಂಪತಿ ಹಾಗೂ ಮಕ್ಕಳನ್ನು ಕಟ್ಟಿಹಾಕಿ,ಥಳಿಸಿ 150 ಗ್ರಾಂ ಚಿನ್ನಾಭರಣ ಹಾಗೂ ₹ 16 ಸಾವಿರ ದರೋಡೆ ಮಾಡಿದ್ದಾರೆ.
ರಸ್ತೆ ಸಾರಿಗೆ ಸಂಸ್ಥೆಯ ಘಟಕದ ಎದುರು ಇರುವರಾಜೇಂದ್ರ ಶಿರಶ್ಯಾಡ ಎಂಬುವವರ ಮನೆಯೇ ದರೋಡೆಗೆ ಒಳಗಾಗಿದೆ. ರಾತ್ರಿ 1ರ ಸುಮಾರಿಗೆ ಮುಸುಕು ಧರಿಸಿ ಬಂದ ಐವರು, ಏಕಾಏಕಿ ಮನೆಯ ಬಾಗಿಲು ಮುರಿದು ಒಳನುಗ್ಗಿದರು. ಚಾಕು, ಚೂರಿ, ಬಡಿಗೆ ತೋರಿಸಿ ಮನೆಯವರನ್ನು ಬೆದರಿಸಿದರು. ಪರಸ್ಪರ ಹಿಂದಿಯಲ್ಲಿ ಮಾತನಾಡುತ್ತಿದ್ದ ಅವರು, ದರೋಡೆಗೆ ಮುಂದಾದಾಗ ದಂಪತಿ ಪ್ರತಿರೋಧ ತೋರಿದರು. ಆಗ ರಾಜೇಂದ್ರ, ಅವರ ಪತ್ನಿ ರಾಜೇಶ್ವರಿ, ಪುತ್ರರಾದ ಪ್ರಜ್ವಲ್, ಪ್ರಫುಲ್ ಅವರ ಕೈ ಕಾಲು ಕಟ್ಟಿಹಾಕಿ, ಥಳಿಸಿದರು. ನಂತರ ಮನೆಯ ತಿಜೋರಿ ಮುರಿದು ನಗ, ನಾಣ್ಯ ದೋಚಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಜೇಂದ್ರ ಅವರು ತಾಲ್ಲೂಕಿನ ಆಂದೋಲಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧಿ ತಜ್ಞರಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಶನಿವಾರ ಬೆಳಿಗ್ಗೆ ಸ್ಥಳ ಪಂಚನಾಮೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.