ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಸ್ವಾಗತ ಕಾಮಾನು
ಬೆಂಗಳೂರು: ‘ಕಾಂಗ್ರೆಸ್ ಹೈಕಮಾಂಡ್ ಒತ್ತಡಕ್ಕೆ ಮಣಿದು ಬಂಡಿಪುರ ಅರಣ್ಯದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಇದ್ದ ನಿಷೇಧವನ್ನು ಕೈಬಿಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ಕರ್ನಾಟಕದ ಅರಣ್ಯ, ಭವಿಷ್ಯದ ಜನಾಂಗಕ್ಕೆ ಮಾಡುತ್ತಿರುವ ದ್ರೋಹ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.
‘ಈ ವಿಚಾರವಾಗಿ ಬಿಜೆಪಿ ಬಾಯಿ ಮುಚ್ಚಿಕೊಂಡು ಕೂರುವುದಿಲ್ಲ, ಎಲ್ಲ ರೀತಿಯ ಹೋರಾಟಕ್ಕೂ ಸಿದ್ಧವಿದೆ’ ಎಂದು ಅವರು ‘ಎಕ್ಸ್’ ಮೂಲಕ ಹೇಳಿದ್ದಾರೆ.
‘ಕಾಂಗ್ರೆಸ್ನ ಹೈಕಮಾಂಡ್ ನಿಷ್ಠೆಗೆ ಕರ್ನಾಟಕ ರಾಜ್ಯ ಬೆಲೆ ತೆರಬೇಕಾಗಿದೆ. ದೆಹಲಿಯಲ್ಲಿ ಹೈಕಮಾಂಡ್ ಸಿದ್ಧಪಡಿಸಿದ ಆದೇಶದ ಪ್ರತಿಯನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಾರ್ಯಗತಗೊಳಿಸಲು ಹೊರಟಿದ್ದಾರೆ. ಆ ಮೂಲಕ ರಾತ್ರಿ ವೇಳೆಯ ಸಂಚಾರದ ನಿಷೇಧವನ್ನು ತೆಗೆಯಲು ಮುಂದಾಗಿದ್ದಾರೆ’ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ವಯನಾಡು ಕ್ಷೇತ್ರದ ಚುನಾವಣೆ ಪ್ರಚಾರ ಆರಂಭಿಸಿದ ದಿನದಿಂದಲೂ ಕರ್ನಾಟಕ ಅರಣ್ಯದ ಹಿತವನ್ನು ಬಲಿಗೊಡಲು ಒತ್ತಡ ಹೆಚ್ಚಾಗಿದೆ. ರಾತ್ರಿ ಸಂಚಾರದ ನಿಷೇಧ ಪುನರ್ಪರಿಶೀಲಿಸುವಂತೆ ತಮ್ಮನ್ನು ಮತ್ತು ಮುಖ್ಯಮಂತ್ರಿ ಅವರನ್ನು ಕೋರಿರುವುದಾಗಿ ಸ್ವತಃ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೊಂಡಿದ್ದರು.
ಕರ್ನಾಟಕ ಸರ್ಕಾರ ವಿಧಾನಸೌಧದಿಂದ ನಡೆಯುತ್ತಿದೆಯೇ ಅಥವಾ 10 ಜನಪಥ್ನಿಂದ ನಡೆಯುತ್ತಿದೆಯೇ? ವಾಸ್ತವ ಸಂಗತಿ ಎಂದರೆ ಬಂಡಿಪುರದಲ್ಲಿ ರಾತ್ರಿ ವೇಳೆ ಸಂಚಾರ ನಿಷೇಧವನ್ನು ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಗಳು ಸಮರ್ಥಿಸಿವೆ. ಅಂತರ್ ರಾಜ್ಯ ಮುಖ್ಯಮಂತ್ರಿಗಳ ಸಭೆಯಲ್ಲೂ ಈ ಕುರಿತು ಒಪ್ಪಂದವೂ ಆಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.