ಬೆಂಗಳೂರು: ಸ್ಥಳೀಯರು ಅಥವಾ ಶೃಂಗೇರಿ ಮಠದ ಧರ್ಮದರ್ಶಿಗಳಿಂದ ಕೋರಿಕೆ ಬಂದರೆ ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ನಡೆಯುತ್ತಿರುವ ಟಿಪ್ಪು ಸುಲ್ತಾನ್ ಸಲಾಂ ಆರತಿ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಶೃಂಗೇರಿಯಲ್ಲಿ ಸಲಾಂ ಆರತಿ ನಿಲ್ಲಿಸುವಂತೆ ಈವರೆಗೆ ಯಾವುದೇ ಮನವಿ ಬಂದಿಲ್ಲ. ಅಂತಹ ಬೇಡಿಕೆ ಬಂದರೆ ಸಲಾಂ ಆರತಿ ನಿಲ್ಲಿಸುತ್ತೇವೆ’ ಎಂದರು.
‘ಟಿಪ್ಪು ಸುಲ್ತಾನ್ ಕನ್ನಡಿಗನಲ್ಲ. ಆತನ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಪರ್ಷಿಯನ್ ಭಾಷೆ ಬಳಸುತ್ತಿದ್ದರು. ಆತ ಒಬ್ಬ ಮತಾಂಧನಾಗಿದ್ದ. ಮೈಸೂರು ಮಹಾರಾಜರು ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಕಾರಣದಿಂದ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಬದಲಿಸಿ ಒಡೆಯರ್ ಎಕ್ಸ್ಪ್ರೆಸ್ ಎಂದು ನಾಮಕರಣ ಮಾಡಲಾಗಿದೆ’ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಬೇಕಿದ್ದರೆ ಜಿನ್ನಾ, ಘಜ್ನಿ, ಲಾಡೆನ್ ಹೆಸರಿನಲ್ಲಿ ರೈಲು ಓಡಿಸಲಿ. ಆಗ ಜನ ಯಾರನ್ನು ಓಡಿಸುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.