ಬಳ್ಳಾರಿ: ತಾಲ್ಲೂಕಿನ ಶಂಕರಬಂಡೆ ಗ್ರಾಮ ಪಂಚಾಯತಿ ಯ 7ನೇ ವಾರ್ಡ್ ನ ತೊಲಮಾಮಿಡಿ ಗ್ರಾಮದ ಅಭ್ಯರ್ಥಿ ಪದ್ಮಾವತಿ ಅವರಿಗೆ ನೀಡಲಾಗಿದ್ದ ಮಡಿಕೆ ಚಿಹ್ನೆಯ ಬದಲಿಗೆ ಮತಪತ್ರದಲ್ಲಿ ಸಿಲಿಂಡರ್ ಚಿಹ್ನೆ ಬಂದಿದ್ದು ಅಭ್ಯರ್ಥಿ ಆಗ್ರಹದ ಮೇರೆಗೆ ಮತದಾನ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಚಿಹ್ನೆ ಬದಲಾದ ಬಗ್ಗೆ ಅಭ್ಯರ್ಥಿ ದೂರಿದ ಬಳಿಕ ತಹಶಿಲ್ದಾರ್ ರೆಹಾನ್ ಪಾಷಾ ಸ್ಥಳಕ್ಕೆ ಭೇಟಿ ನೀಡಿದರು.
ಮಾಹಿತಿ ದೊರಕುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದಲು ಅಡಾವತ್, ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ ಪರಿಶೀಲನೆ ನಡೆಸಿದರು.
ಮುದ್ರಣ ದೋಷದಿಂದಾಗಿ ತೊಲಮಾಮಡಿ ಮತಗಟ್ಟೆಯ ಅಭ್ಯರ್ಥಿ ಪದ್ಮಾವತಿ ಅವರ ಚಿಹ್ನೆ ಮಡಿಕೆಯ ಬದಲಿಗೆ ಸಿಲಿಂಡರ್ ಚಿಹ್ನೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ. ಪಂಚಾಯತಿ ಚುನಾವಣಾಧಿಕಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಎರಡನೇ ಹಂತದ ಚುನಾವಣೆಯ ದಿನ ಅಥವಾ ಬೇರೆ ದಿನ ಈ ಮತಗಟ್ಟೆಯಲ್ಲಿ ಮತದಾನ ನಡೆಸಲಾಗುವುದು ಎಂದು ಎಸ್.ಎಸ್. ನಕುಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.