ADVERTISEMENT

ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಸುಳಿವು

ಜೆಡಿಎಸ್‌ನಿಂದ ಅವಮಾನ, ದೊರಕದ ಅಧಿಕಾರ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2021, 21:30 IST
Last Updated 24 ಆಗಸ್ಟ್ 2021, 21:30 IST
ಜಿ.ಟಿ.ದೇವೇಗೌಡ
ಜಿ.ಟಿ.ದೇವೇಗೌಡ   

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ಸೇರುವ ಕುರಿತು ಮಂಗಳವಾರ ಸುಳಿವು ನೀಡಿದ್ದು, ಜೆಡಿಎಸ್‌ ಪಕ್ಷ ಕುರಿತಂತೆ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹುಣಸೂರು ಕ್ಷೇತ್ರದಿಂದ ನನ್ನ ಮಗ ಹರೀಶ್‌ಗೌಡನಿಗೆ ಟಿಕೆಟ್ ನೀಡಲಿಲ್ಲ. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಆತ ಭೇಟಿ ಮಾಡಿದಾಗ ಎಚ್‌.ಡಿ.ಕುಮಾರಸ್ವಾಮಿ ಸರಿಯಾಗಿ ಸ್ಪಂದಿಸಲಿಲ್ಲ. ಪಾಲಿಕೆ ಚುನಾವಣೆ ಟಿಕೆಟ್ ಹಂಚಿಕೆ ಕುರಿತು ನನ್ನೊಂದಿಗೆ ಆಡಿದ ಮಾತುಗಳನ್ನು ಹೇಳಲಾರೆ. ಪ್ರತಿ ಹಂತದಲ್ಲೂನನಗೆ ಅವಮಾನವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಇತ್ತೀಚೆಗೆ ಭೇಟಿಯಾಗಿ ಪಕ್ಷ ತೊರೆಯುವ ಬಗ್ಗೆ ತಿಳಿಸಿದ್ದೇನೆ. ತಮ್ಮ ಜತೆಗೆ ಇರಲು ಕೋರಿದರು. ಆಗದು ಎಂದು ಕ್ಷಮೆ ಕೋರಿದೆ. ಈಗಾಗಲೇ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿರುವುದಾಗಿಯೂ ತಿಳಿಸಿದೆ’ ಎಂದರು.

ADVERTISEMENT

‘ಬಿಜೆಪಿ ಕಡೆಗೆ ಹೋಗಬೇಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್‌ ಸೇರಿದರೆ ನಾನು ಹಾಗೂ ನನ್ನ ಮಗ ಜಿ.ಡಿ.ಹರೀಶ್‌ಗೌಡರಿಗೆ ಟಿಕೆಟ್ ನೀಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದೇನೆ. ನಾನು ಪಕ್ಷಕ್ಕೆ ಸೇರಿದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾವುಮತ್ತೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಕೂಡಾ ಹೇಳಿದ್ದಾರೆ’ ಎಂದು ತಿಳಿಸಿದರು.

‘ಎಚ್‌ಡಿಕೆ ಬೆಂಬಲವಿಲ್ಲದೇ ಶಾಸಕ ಸಾ.ರಾ.ಮಹೇಶ್ ತಮ್ಮ ಶಕ್ತಿ ತೋರಿಸಲಿ. ಕುಮಾರಸ್ವಾಮಿ ಮುಖವಾಣಿಯಾಗಿಟ್ಟುಕೊಂಡು ಅವರು ಸಿಂಗಲ್‌ ಲೀಡರ್ ಆಗುತ್ತಿದ್ದಾರೆ. ಹೀಗಾಗಿ ಪಕ್ಷದ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.