ADVERTISEMENT

ಬಿಜೆಪಿ ಮುಖಂಡರ ವರ್ತನೆಯಿಂದಾಗಿ ಚಂದ್ರಶೇಖರ್‌ ಹೊರ ಬಂದಿದ್ದಾರೆ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 10:00 IST
Last Updated 1 ನವೆಂಬರ್ 2018, 10:00 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ಬಿಜೆಪಿಯ ಹಿರಿಯ ಮುಖಂಡರು ನಡೆಸಿಕೊಂಡ ರೀತಿಯಿಂದ ಬೇಸತ್ತು, ರಾಮನಗರದಲ್ಲಿ ಸ್ಪರ್ಧಿಸಿದ್ದ ಎಲ್‌.ಚಂದ್ರಶೇಖರ್‌ ಸ್ಪರ್ಧೆಯಿಂದ ಹಿಂದೆ ಸರಿದಿರಬಹುದು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ:ರಾಮನಗರ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್

ಈ ಹಿಂದೆಯೂ ಎಸ್‌.ಎಂ.ಕೃಷ್ಣ ಅವರನ್ನು ಬಿಜೆಪಿಗೆ ಬರಮಾಡಿಕೊಳ್ಳಲು ತೋರಿದ ಆತುರ ಮತ್ತು ಉತ್ಸಾಹವನ್ನು ನಾವು ನೋಡಿದ್ದೇವೆ. ಆ ಬಳಿಕ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ ಎಂದು ನಾವಿಂದು ಕಾಣುತ್ತಿದ್ದೇವೆ. ಇದೇ ಸ್ಥಿತಿ ಕಾಂಗ್ರೆಸ್‌ನಿಂದ ಹೋಗಿದ್ದ ಚಂದ್ರಶೇಖರ್‌ ಅವರಿಗೆ ಆಗಿರಬಹುದು. ಹೊರಬಂದಿರುವ ಅಭ್ಯರ್ಥಿ ನಮ್ಮಡೆಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಅವರು ಹೇಳಿದರು.

‘ಅಭ್ಯರ್ಥಿಗೆ ನಾವು ಆಮಿಷ ಒಡ್ಡಿದ್ದೇವೆ ಎಂಬ ಬಿಜೆಪಿ ಆರೋಪ ಸುಳ್ಳು. ಆ ಕ್ಷೇತ್ರದ ಜವಾಬ್ದಾರಿಯನ್ನು ಕೇಂದ್ರ ಸಚಿವ ಸದಾನಂದಗೌಡರಿಗೆ ವಹಿಸಲಾಗಿತ್ತು. ಈ ಬೆಳವಣಿಗೆಯಿಂದ ಅವರಿಗೆ ಮುಖಭಂಗವಾಗಬಹುದೆಂದು ಆಮಿಷದ ಸುಳ್ಳು ಹಬ್ಬಿಸುತ್ತಿದ್ದಾರೆ’ ಎಂದು ಕುಟುಕಿದರು.

ಟಿಪ್ಪು ಜಯಂತಿಯ ಆಚರಣೆ ಕುರಿತು ಪ್ರತಿಕ್ರಿಯಿಸಿ, ‘ಬಿಜೆಪಿಗೆ ಸರ್ವಜನಾಂಗದ ಶಾಂತಿಯ ತೋಟ ನಮ್ಮ ನಾಡು ಎಂಬ ಸಾಲು ಅರ್ಥವಾಗಿಲ್ಲ. ಅದನ್ನು ಅವರು ಗೌರವಿಸುವುದೂ ಇಲ್ಲ. ನಮ್ಮ ಸರ್ಕಾರ ಎಲ್ಲ ಸಮುದಾಯಗಳ ಆಶೋತ್ತರಗಳಿಗೆ ಸ್ಪಂದಿಸಲು, ರಕ್ಷಣೆ ನೀಡಲು ಸಿದ್ದವಿದೆ. ಈ ಹಿಂದಿನ ಸರ್ಕಾರಗಳು ಯಾವೆಲ್ಲಾ ಆಚರಣೆಗಳನ್ನು ನಡೆಸಬೇಕು ಎಂದು ತೀರ್ಮಾನಗಳನ್ನು ತೆಗೆದುಕೊಂಡಿವೆ. ಅವುಗಳನ್ನು ಮುಂದುವರಿಸೋದು ನಮ್ಮ ಜವಾಬ್ದಾರಿ. ಅದರಂತೆ ಮುಂದುವರಿಯುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT