ADVERTISEMENT

ಚಿಕ್ಕಮಗಳೂರು: ಯುವಕನಿಗೆ ‘ಮೂತ್ರ ನೆಕ್ಕಿಸಿದ್ದ’ ಪಿಎಸ್ಐ ಅರ್ಜುನ್‌ ಬಂಧನ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 20:42 IST
Last Updated 1 ಸೆಪ್ಟೆಂಬರ್ 2021, 20:42 IST
ಪಿಎಸ್ಐ ಅರ್ಜುನ್
ಪಿಎಸ್ಐ ಅರ್ಜುನ್   

ಬೆಂಗಳೂರು: ಪರಿಶಿಷ್ಟ ಸಮುದಾಯದ ಯುವಕರೊಬ್ಬರಿಗೆ ಮೂತ್ರ ನೆಕ್ಕಿಸಿದ್ದ ಪ್ರಕರಣದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಠಾಣೆ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ಅರ್ಜುನ್ ಅವರನ್ನು ಸಿಐಡಿ ಪೊಲೀಸರು ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಬಂಧಿಸಿದ್ದಾರೆ.

‘ಮಹಿಳೆಗೆ ಕರೆ ಮಾಡಿದ್ದ ವಿಚಾರಕ್ಕಾಗಿ ಅರ್ಜುನ್‌, ನನ್ನನ್ನು ಠಾಣೆಗೆ ಕರೆದೊಯ್ದು ಥಳಿಸಿದ್ದರು. ಕುಡಿಯಲು ನೀರು ಕೇಳಿದಾಗ, ವ್ಯಕ್ತಿಯೊಬ್ಬರಿಂದ ನನ್ನ ಬಾಯಿಗೆ ಮೂತ್ರ ಹೊಯ್ಯಿಸಿದ್ದರು. ನೆಲದ ಮೇಲೆ ಬಿದ್ದಿದ್ದ ಮೂತ್ರವನ್ನೂ ನೆಕ್ಕಿಸಿದ್ದರು’ ಎಂದು ಆರೋಪಿಸಿ ಮೂಡಿಗೆರೆ ತಾಲ್ಲೂಕಿನ ಕಿರಗುಂದದ ಯುವಕ ಕೆ.ಎಲ್‌. ಪುನೀತ್, ಗೋಣಿಬೀಡು ಠಾಣೆಗೆ ದೂರು ನೀಡಿದ್ದರು. ಅರ್ಜುನ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಡಿಜಿಪಿ ಬಿ.ಎಸ್. ಸಂಧು ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಿದ್ದ ಎಸ್ಪಿ ರವಿ ಚನ್ನಣ್ಣನವರ ನೇತೃತ್ವದ ತಂಡ, ಆರೋಪಿಯನ್ನು ಬಂಧಿಸಿದೆ.

ADVERTISEMENT

ಮೇ 10 ರಂದು ಈ ಪ್ರಕರಣ ನಡೆದಿದ್ದು, ಪಿಎಸ್‌ಐ ವಿರುದ್ಧ ಮೇ 22ರಂದು ದೂರು ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಅರ್ಜುನ್, ನಿರೀಕ್ಷಣಾ ಜಾಮೀನು ಕೋರಿ ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಧೀಶ ಕೆ.ಎಲ್‌. ಅಶೋಕ್‌ ವಜಾಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.