ಬೆಂಗಳೂರು:ಪಚ್ಚನಾಡಿ ನೆಲಭರ್ತಿ ಘಟಕದಲ್ಲಿ ಸಂಭವಿಸಿದ ಭೂಕುಸಿತದಿಂದ ತೊಂದರಿಗೆ ಸಿಲುಕಿದ ಎಲ್ಲರಿಗೂ ಒಂದು ವಾರದಲ್ಲಿ ಪರಿಹಾರ ನೀಡಬೇಕು ಎಂದು ಮಂಗಳೂರು ನಗರ ಪಾಲಿಕೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಅಕ್ರಮವಾಗಿ ಮತ್ತುಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವ ಬಗ್ಗೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ,ನಗರಾಭಿವೃದ್ಧಿ ಇಲಾಖೆ ಮತ್ತು ಮಂಗಳೂರು ಪಾಲಿಕೆ ಸಲ್ಲಿಸಿದ್ದ ವಿವರಣೆಯನ್ನು ಪರಿಶೀಲನೆ ನಡೆಸಿತು.
ಏಷ್ಯನ್ ಬ್ಯಾಂಕ್ ಅನುದಾನ ಪಡೆದು ಪ್ರತಿದಿನ 225 ಟನ್ ತ್ಯಾಜ್ಯಸಂಸ್ಕರಣೆ ಮತ್ತು ವಿಲೇವಾರಿಯನ್ನು ಮಂಗಳೂರು ಪಾಲಿಕೆ 2010ರಿಂದ ಮಾಡುತ್ತಿದೆ. ಆದರೆ, ನಿತ್ಯ 425 ಟನ್ ಕಸ ಸಂಗ್ರಹವಾಗುತ್ತಿದೆ. ಸಮಸ್ಯೆ ಸರಿಪಡಿಸಲು ₹22 ಕೋಟಿ ಅನುದಾನವನ್ನು ರಾಜ್ಯ ಸರ್ಕಾರದಿಂದ ಕೋರಲಾಗಿದ್ದು, ಆದರೆ, ₹8 ಕೋಟಿ ಮಾತ್ರ ದೊರೆತಿದೆ. ನೆಲಭರ್ತಿ ಘಟಕ ಕುಸಿತದಿಂದ ತೊಂದರೆಗೆ ಸಿಲುಕಿದ್ದಾರೆ ಎಂದು ಗುರುತಿಸಲಾದ 35 ಜನರಲ್ಲಿ 19 ಜನರಿಗೆ ₹4 ಕೋಟಿಯನ್ನು ಪರಿಹಾರವಾಗಿ ವಿತರಿಸಲಾಗಿದೆ’ ಎಂದು ಪಾಲಿಕೆ ವಿವರಿಸಿದೆ.
ಹೊಸ ಕಟ್ಟಡಗಳ ನಿರ್ಮಾಣಕ್ಕೆಮೂರು ವರ್ಷಗಳಲ್ಲಿ ಪಾಲಿಕೆ ನೀಡಿರುವಅನುಮತಿಗಳ ಸಂಖ್ಯೆ, 2017ರಿಂದ ಈಚೆಗೆ ಪ್ರತಿನಿತ್ಯ ಉತ್ಪತ್ತಿಯಾಗುವ ಕಸದ ಪ್ರಮಾಣದ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಪೀಠ ತಿಳಿಸಿತು.
ಪ್ರತಿನಿತ್ಯಿ 200 ಟನ್ ಕಸವನ್ನು ಅಕ್ರಮವಾಗಿ ಸುರಿಯುತ್ತಿರುವ ಮಾಹಿತಿ ಇದ್ದರೂ ಮೌನ ವಹಿಸಿರುವ ಸರ್ಕಾರದ ನಡೆಯನ್ನು ಪೀಠ ತರಾಟೆಗೆ ತೆಗೆದುಕೊಂಡಿತು. ₹8 ಕೋಟಿ ಮಾತ್ರ ಬಿಡುಗಡೆ ಮಾಡಲು ಮತ್ತು ಘನತ್ಯಾಜ್ಯ ನಿರ್ವಹಣೆ ನಿಯಮಗಳ ಪಾಲನೆಗೆ ಕ್ರಮ ಕೈಗೊಳ್ಳದಿರಲು ಕಾರಣ ಏನು ಎಂಬುದರ ಬಗ್ಗೆ ವಿವರಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.