ADVERTISEMENT

ಕನ್ನಡ ಧ್ವಜಕ್ಕೆ ಆಕ್ಷೇಪ: ಶಿವಸೇನಾ, ಎಂಇಎಸ್‌ ವಿರುದ್ಧ ಗುಡುಗಿದ ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 9:44 IST
Last Updated 21 ಜನವರಿ 2021, 9:44 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ನಮ್ಮ ನೆಲ, ನಮ್ಮ ಭಾಷೆ, ನಮ್ಮ ಧ್ವಜ. ಕನ್ನಡ ಮಾತಾಡುತ್ತೇವೆ, ಕನ್ನಡದ ಧ್ವಜ ಹಾರಿಸುತ್ತೇವೆ. ಅದನ್ನು ಕೇಳಲು ಎಂಇಎಸ್‌, ಶಿವಸೇನೆಯವರು ಯಾವ ಊರ ದೊಣ್ಣೆ ನಾಯಕರು? ಇವರ ಬಾಧೆಯಾದರೂ ಏನು? ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಎಂಇಎಸ್‌ ಪ್ರತಿಭಟನೆ ಖಂಡಿಸಿ ಸರಣಿ ಟ್ವೀಟ್‌ ಮಾಡಿರುವ ಅವರು, ‘ಬೆಳಗಾವಿ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವಿಗೆ ಇವರು ಇಂದು ನಡೆಸುತ್ತಿರುವ ಪ್ರತಿಭಟನೆ ಸಮಾಜವಿರೋಧಿ. ಇವರ ಮನಸ್ಸಲ್ಲಿರುವ ವಿಷ ದೇಶದ್ರೋಹಕ್ಕೆ ಸಮ’ ಎಂದು ಕಿಡಿಕಾರಿದ್ದಾರೆ.

‘ಬೆಳಗಾವಿಯಲ್ಲಿ ಇಂದು ಕನ್ನಡ ಧ್ವಜ ವಿರೋಧಿಸಿ ಎಂಇಎಸ್‌, ಶಿವಸೇನೆ ನಡೆಸುವ ಪ್ರತಿಭಟನೆಯನ್ನು ಸಮಾಜವಿದ್ರೋಹಿ, ದೇಶದ್ರೋಹಿ, ಘಾತಕ ಕೃತ್ಯವೆಂದು ಹೇಳಲು ಅಡ್ಡಿಯಿಲ್ಲ. ದೇಶದ ಸಾಮರಸ್ಯಕ್ಕೆ, ಭಾಷಾ ಸೌಹಾರ್ದತೆಗೆ ಈ ಹೋರಾಟ ವಿಷ ಹಿಂಡಲಿದೆ ಎಂಬುದರಲ್ಲಿ ಎರಡು ಮಾತೂ ಇಲ್ಲ. ಇದರ ಹಿಂದೆ ಮಹಾರಾಷ್ಟ್ರ ಇದೆ ಎಂಬುದಕ್ಕೆ ಸಾಕ್ಷಿಯೂ ಬೇಕಿಲ್ಲ’ ಎಂದಿದ್ದಾರೆ.

ADVERTISEMENT

‘ಈ ಧ್ವಜ ವಿರೋಧಿ ಹೋರಾಟವನ್ನು ರಾಜ್ಯದ ಪ್ರತಿಯೊಬ್ಬರೂ ಪಕ್ಷಾತೀತವಾಗಿ ವಿರೋಧಿಸಬೇಕಾಗಿದೆ. ಕನ್ನಡದ ವಿಚಾರಕ್ಕೆ ಮಾತಾಡಲು, ಕನ್ನಡಕ್ಕೆ ಕೈ ಎತ್ತಲು ರಾಜ್ಯದ ನಾಯಕರು ರಾಜಕೀಯ ಮರೆಯಬೇಕು. ಪಕ್ಷ ನೋಡಬಾರದು, ಮಿತ್ರಪಕ್ಷವೆಂದು ಎಣಿಸಬಾರದು, ದೆಹಲಿ ಕಡೆಗೆ ನೋಡಬಾರದು. ಆಗ ಮಾತ್ರ ಇಂಥ ಆಕ್ರಮಣಕಾರಿ ಪ್ರವೃತ್ತಿಗಳನ್ನು ನಾವು ಹತ್ತಿಕ್ಕಲು ಸಾಧ್ಯ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.