
ಎಚ್.ಡಿ. ಕುಮಾರಸ್ವಾಮಿ
ಕೆ.ಆರ್. ನಗರ (ಮೈಸೂರು ಜಿಲ್ಲೆ): ‘ಅತ್ಯಂತ ಸಣ್ಣ ಪ್ರಮಾಣದಲ್ಲಿರುವ ನಾಮಧಾರಿಗೌಡ ಒಕ್ಕಲಿಗ ಸಮುದಾಯವನ್ನು ‘2ಎ ಪ್ರವರ್ಗ’ಕ್ಕೆ ಸೇರಿಸುವ ಪ್ರಯತ್ನಕ್ಕೆ ನಾನು ಪ್ರಾಮಾಣಿಕವಾಗಿ ಬೆಂಬಲ ನೀಡುತ್ತೇನೆ’ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಇಲ್ಲಿ ಭಾನುವಾರ ನಡೆದ ನಾಮಧಾರಿಗೌಡ ಸಮುದಾಯ ಭವನದ ಬೆಳ್ಳಿಹಬ್ಬದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಒತ್ತಾಯದ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡು ಬನ್ನಿ. ಹಿಂದುಳಿದ ವರ್ಗಗಳ ಆಯೋಗಕ್ಕೆ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಬೇಡಿಕೆಯ ಪತ್ರಗಳನ್ನೂ ತನ್ನಿ’ ಎಂದು ಹೇಳಿದರು.
‘ಸಣ್ಣ ಪ್ರಮಾಣದ ಜನಸಂಖ್ಯೆ ಹೊಂದಿರುವ ನಾಮಧಾರಿಗೌಡ ಸಮುದಾಯವು ರಾಜಕೀಯ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕಿದೆ. ನಮ್ಮನ್ನು ಗುರುತಿಸಬೇಕು ಎಂದು ಸಮುದಾಯದ ಜನರು ಕೇಳುತ್ತಲೇ ಇದ್ದಾರೆ. ನೋವು, ಆತಂಕ ಬಿಡಿ. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಲು ಪ್ರಾಣಿಕವಾಗಿ ಪ್ರಯತ್ನ ಮಾಡುತ್ತೇವೆ’ ಎಂದರು.
ಸಣ್ಣ ಸಮುದಾಯಗಳಿಗೆ:
‘ಚಿಕ್ಕಮಗಳೂರು ಭಾಗದಲ್ಲಿ ಸರ್ಪಒಕ್ಕಲಿಗರು ಇದ್ದಾರೆ. ಸಣ್ಣ ಪ್ರಮಾಣದ ಸಮುದಾಯವದು. ಆ ಸಮುದಾಯಕ್ಕೆ ಸೇರಿದ ಎಸ್.ಆರ್. ಲಕ್ಷ್ಮಯ್ಯ ಎಂಬ ನಾಯಕರಿದ್ದರು. ಆ ಕ್ಷೇತ್ರದಲ್ಲಿ ಅವರ ಸಮುದಾಯದ ಸಾವಿರ ಮತಗಳೂ ಇರಲಿಲ್ಲ. ಅವರನ್ನು ಎಚ್.ಡಿ. ದೇವೇಗೌಡರು ಎರಡು ಬಾರಿ ಶಾಸಕರನ್ನಾಗಿ ಮಾಡಿದರು. ನಂತರ ಅವರ ಪುತ್ರ ಧರ್ಮೇಗೌಡರು ಎರಡು ಬಾರಿ ಪರಿಷತ್ ಸದಸ್ಯರಾದರು, ಒಮ್ಮೆ ಉಪಸಭಾಪತಿಯಾದರು. ಅವರ ಇನ್ನೊಬ್ಬ ಪುತ್ರ ಎಸ್.ಎಲ್. ಭೋಜೇಗೌಡರು ನಮ್ಮ ಪಕ್ಷದ ಎಂಎಲ್ಸಿ ಆಗಿದ್ದಾರೆ’ ಎಂದು ತಿಳಿಸಿದರು.
‘ಇನ್ನೊಂದು ಅತಿ ಸಣ್ಣ ಸಮುದಾಯವಾದ ಉಪ್ಪಾರ ಸಮಾಜಕ್ಕೂ ನಮ್ಮ ಪಕ್ಷ ಅವಕಾಶ ಕೊಟ್ಟಿದೆ. ಎಚ್.ಸಿ. ನೀರಾವರಿ ಅವರನ್ನು ಗುರುತಿಸಿ ನಾವು ರಾಜಕೀಯಕ್ಕೆ ತಂದೆವು. ಈ ರೀತಿ ಅನೇಕ ಸಮುದಾಯಗಳಿಗೆ ಜೆಡಿಎಸ್ ಅವಕಾಶದ ಬಾಗಿಲು ತೆರೆದಿದೆ. ಕೆಲವರು ನಾವು ಹಿಂದುಳಿದ ನಾಯಕರೆಂದು ಫಲಕ ಹಾಕಿಕೊಂಡು ಓಡಾಡುತ್ತಾರೆ. ಆದರೆ, ಆ ಸಮುದಾಯವನ್ನು ಬೆಳೆಸಿದವರು ದೇವೇಗೌಡರು’ ಎಂದರು.
‘ನಾಮಧಾರಿಗೌಡ ಸಮುದಾಯದ ಒಬ್ಬರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಗುವುದು. ಸಮುದಾಯಕ್ಕೆ ಶಕ್ತಿ ತುಂಬಲಾಗುವುದು. ಸಮಾಜದ ಯುವಕರು ರಾಜಕೀಯಕ್ಕೆ ಬರಬೇಕು. ನನಗೆ ರಾಜಕೀಯ ಶಕ್ತಿ ತುಂಬಲೆಂದು ನಾನು ಭರವಸೆ ನೀಡುವುದಿಲ್ಲ. ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ’ ಎಂದು ತಿಳಿಸಿದರು.
ಅನುದಾನದ ಭರವಸೆ:
‘ದೇವಸ್ಥಾನ ಕಟ್ಟಲು ಸಿಎ ನಿವೇಶನ ಕೇಳಿದ್ದೀರಿ. ನಾನು ನಿವೇಶನ ಕೊಡಲು ಬರುವುದಿಲ್ಲ. ರಾಜ್ಯ ಸರ್ಕಾರದಿಂದ ಕೊಡಿಸುವ ಕೆಲಸ ಮಾಡುತ್ತೇನೆ. ಸಮುದಾಯ ಭವನದ ಅಭಿವೃದ್ಧಿಗೆ ಅನುದಾನ ಕೊಡುತ್ತೇನೆ’ ಎಂದು ಭರವಸೆ ನೀಡಿದರು.
ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್, ವಿಧಾನಪರಿಷತ್ ಸದಸ್ಯರಾದ ಎ.ಎಚ್. ವಿಶ್ವನಾಥ್, ಸಿ.ಎನ್. ಮಂಜೇಗೌಡ, ಕೆ.ವಿವೇಕಾನಂದ, ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್, ಕ್ಷೇತ್ರದ ಶಾಸಕ ಡಿ.ರವಿಶಂಕರ್, ಸಮುದಾಯದ ಮುಖಂಡ ಅಶೋಕ್ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.