ADVERTISEMENT

ಬೀದರ್‌ನಲ್ಲಿ ಭಾರಿ ಮಳೆ: ವ್ಯಕ್ತಿ ಸಾವು

ಮನೆಗಳಿಗೆ ನುಗ್ಗಿದ ನೀರು, ಹೊಲಗದ್ದೆಗಳು ಜಲಾವೃತ– ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 18:57 IST
Last Updated 16 ಸೆಪ್ಟೆಂಬರ್ 2020, 18:57 IST
ಮರಿಯಮ್ಮನಹಳ್ಳಿ ಸಮೀಪದ ಡಣಾಯಕನಕೆರೆಗೆ ಬುಧವಾರ ಕೋಡಿ ಬಿದ್ದಿದ್ದು, ಕೆರೆ ಮಾಗಾಣಿ ಪ್ರದೇಶದಲ್ಲಿ ಬೆಳೆದ ಜೋಳದ ಬೆಳೆ ಜಲಾವೃತವಾಗಿದೆ
ಮರಿಯಮ್ಮನಹಳ್ಳಿ ಸಮೀಪದ ಡಣಾಯಕನಕೆರೆಗೆ ಬುಧವಾರ ಕೋಡಿ ಬಿದ್ದಿದ್ದು, ಕೆರೆ ಮಾಗಾಣಿ ಪ್ರದೇಶದಲ್ಲಿ ಬೆಳೆದ ಜೋಳದ ಬೆಳೆ ಜಲಾವೃತವಾಗಿದೆ   

ಬೆಂಗಳೂರು: ರಾಜ್ಯದ ಕಲಬುರ್ಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬುಧವಾರ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಬೆಳೆ ನಷ್ಟವಾಗಿದೆ.

ಕಲಬುರ್ಗಿ ನಗರ ಸೇರಿದಂತೆ ಜಿಲ್ಲೆಯ ಚಿಂಚೋಳಿ, ಕಾಳಗಿ, ವಾಡಿ, ಚಿತ್ತಾಪುರ, ಅಫಜಲಪುರ, ಜೇವರ್ಗಿ, ಕಮಲಾಪುರ ಮತ್ತು ಯಡ್ರಾಮಿಯಲ್ಲಿ ಮಳೆಯಾಯಿತು. ಕಾಗಿಣಾ ನದಿ ಉಕ್ಕಿ ಹರಿಯುತ್ತಿದ್ದು ಇಂಗಳಗಿ– ಶಹಬಾದ್ ರಸ್ತೆ ಸಂಪರ್ಕ ಕಡಿತವಾಗಿದೆ.

ವ್ಯಕ್ತಿ ಸಾವು: ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಸಾಯಿಗಾಂವ ಹತ್ತಿರದ ಹಳ್ಳದ ಸೇತುವೆಯನ್ನು ಬೈಕ್‌ನಲ್ಲಿ ದಾಟು
ವಾಗ ನೀರಿನಲ್ಲಿ ಕೊಚ್ಚಿ ಹೋಗಿ ಬೋಳೆಗಾಂವ ಗ್ರಾಮದ ಮನೋಜ ಗುಂಡಾಜಿ (31) ಎಂಬುವರು ಮೃತಪಟ್ಟಿದ್ದಾರೆ.

ADVERTISEMENT

ಭಾಲ್ಕಿ, ಕಮಲನಗರ, ಔರಾದ್ ಮತ್ತು ಹುಮನಾಬಾದ್ ತಾಲ್ಲೂಕಿನ ಹಳ್ಳಕೊಳ್ಳಗಳು ತುಂಬಿವೆ. ಮಾಂಜ್ರಾ ನದಿ ಒಳ ಹರಿವು ಹೆಚ್ಚಿದ್ದು, ನದಿಪಾತ್ರದ ಗ್ರಾಮಗಳ ಜನರಲ್ಲಿ ಆತಂಕ ಎದುರಾಗಿದೆ. ಔರಾದ್‌ ತಾಲ್ಲೂಕಿನಲ್ಲಿ ಹೊಲಗಳು ಜಲಾವೃತವಾಗಿವೆ. ‌

ರಾಯಚೂರು ತಾಲ್ಲೂಕಿನಲ್ಲಿ ಮಳೆಗೆ ಬೆಳೆ ಹಾನಿಯಾಗಿದೆ. ಆತ್ಕೂರು,ಶಕ್ತಿನಗರ–ಕಾಡ್ಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಿರು ರೈಲ್ವೆ ಸೇತುವೆ ಜಲಾವೃತವಾಗಿದೆ. ಯಾದಗಿರಿ ಜಿಲ್ಲೆಯ ಕೆಲವಡೆ ಮನೆ ಮತ್ತು ಹೊಲಗದ್ದೆಗಳಲ್ಲಿ ನೀರು ನುಗ್ಗಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಸಮೀಪದ ಡಣಾಯಕನಕೆರೆಗೆ ಕೋಡಿ ಬಿದ್ದಿದ್ದು, ಜೋಳದ ಹೊಲಗಳು ಜಲಾವೃತವಾಗಿವೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಾಪಟ್ಟಣ, ಉಪನಾಯಕನಹಳ್ಳಿ ಮತ್ತು ವಟ್ಟಮ್ಮನಹಳ್ಳಿ ಗ್ರಾಮದಲ್ಲಿ ತಲಾ ಒಂದೊಂದು ಮನೆಗಳಿಗೆ ಹಾನಿಯಾಗಿದೆ.

ಬಾಗಲಕೋಟೆ, ಗದಗ, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಭಾಗದಲ್ಲಿ ಬಿರುಸಾಗಿ ಮಳೆ ಸುರಿದಿದೆ.

ಬೋಟ್ ಮುಳುಗಡೆ–ರಕ್ಷಣೆ: ಉಡುಪಿ ಸಮೀಪದ ಮಲ್ಪೆ ಬಂದರಿನಿಂದ ಹೊರಟಿದ್ದ ‘ಹನುಮತೀರ್ಥ’ ಮೀನುಗಾರಿಕಾ ಬೋಟ್‌ ಮಂಗಳವಾರ ಸೇಂಟ್ ಮೇರಿಸ್‌ ದ್ವೀಪದ ಬಳಿ ಮುಳುಗಿದ್ದು, ಅದರಲ್ಲಿದ್ದ 29 ಮಂದಿಯನ್ನೂ ರಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.