ಹುಬ್ಬಳ್ಳಿ: ಉತ್ತರ ಕನ್ನಡದ ಕರಾವಳಿ ಭಾಗ ಹಾಗೂ ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಭಾನುವಾರ ಕೆಲ ಕಾಲ ಜೋರು ಮಳೆಯಾಯಿತು. ವಾರದಿಂದ ಬಿಡುವು ನೀಡಿದ್ದ ಮಳೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಶನಿವಾರ ರಾತ್ರಿಯಿಂದ ಮತ್ತೆ ಶುರುವಾಗಿದೆ.
ಕಾರವಾರದಲ್ಲಿ ಶನಿವಾರ ರಾತ್ರಿ ಗಾಳಿ, ಗುಡುಗುಸಹಿತ ಜೋರಾಗಿ ಮಳೆಯಾಯಿತು. ಅಂಕೋಲಾ ತಾಲ್ಲೂಕಿನ ಕೇಣಿಯಲ್ಲಿ ಗಾಳಿಯ ರಭಸಕ್ಕೆ ಮನೆಯೊಂದರ ತಗಡಿನ ಶೀಟಿನ ಚಾವಣಿ ಹಾರಿ ಹೋಗಿದೆ. ಕೆಲವು ಮನೆಗಳ ಹೆಂಚು ಪುಡಿಯಾಗಿವೆ. ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲೂ ಸಾಧಾರಣ ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ ಕೆಲವೆಡೆ ಸಾಧಾರಣ ಮಳೆಯಾಗಿದೆ. ಆಗುಂಬೆಯಲ್ಲಿ 5.12 ಸೆಂ.ಮೀ ಮಳೆಯಾಗಿದೆ. ಸಾಗರ, ಸೊರಬ, ಹೊಸನಗರ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ತುಂತುರು ಮಳೆಯಾಗಿದೆ. ಮೈಸೂರು ತಾಲ್ಲೂಕಿನ ವರುಣಾ ಹೋಬಳಿಯ ಹಲವೆಡೆ ಸಾಧಾರಣ ಮಳೆಯಾಗಿದೆ. ಮೆಲ್ಲಹಳ್ಳಿ, ವರುಣಾ, ವರಕೋಡು, ಹಾರೋಹಳ್ಳಿ, ದಂಡಿಕೆರೆ ಇನ್ನಿತರ ಭಾಗಗಳಲ್ಲಿ ಕೆಲ ಕಾಲ ಮಳೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.