ಬೆಂಗಳೂರು: ತಾಪಮಾನ ಏರಿಕೆಯಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇದೇ 23ರಿಂದ 26ರವರೆಗೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಈ ಭಾಗದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನಲ್ಲಿ ಏ.24ರಂದು ವೇಗವಾದ ಗಾಳಿ ಸಹಿತ ಗುಡುಗು ಸಿಡಿಲು ಹೆಚ್ಚಾಗಿರಲಿದ್ದು, ಮಳೆ ಪ್ರಮಾಣ ಕಡಿಮೆ ಇರಲಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗಲಿದ್ದು, ಶುಷ್ಕ ವಾತಾವರಣ ಇರಲಿದೆ.
ಶಿವಮೊಗ್ಗ ಜಿಲ್ಲೆಯ ಅರಸಾಳು ಭಾಗದಲ್ಲಿ ಬುಧವಾರ ಗರಿಷ್ಠ 8 ಸೆಂ.ಮೀ.ಮಳೆಯಾಗಿದೆ. ರಾಮಗಿರಿ, ಹುಂಚದಕಟ್ಟೆ 3, ಕಳಸಾ, ಹುಕ್ಕೇರಿ, ಬೆಳಗಾವಿ 2, ಬೈಲಹೊಂಗಲ, ಚಿಂಚೋಳಿ, ಕುಷ್ಟಗಿ, ದಾವಣಗೆರೆ, ಶೃಂಗೇರಿ, ಭರಮಸಾಗರದಲ್ಲಿ ತಲಾ 1 ಸೆಂ.ಮೀ.ಮಳೆಯಾಗಿದೆ.
ಒಂದು ವಾರದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ 35ರಿಂದ ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ಏರಿಕೆ ಕಂಡಿದೆ. ಸುಡುಬಿಸಿಲಿನ ಧಗೆಯ ಜೊತೆಗೆ ರಾತ್ರಿ ವೇಳೆ ಸೆಕೆಯೂ ಹೆಚ್ಚಾಗಿದೆ.
ಕಲಬುರ್ಗಿಯಲ್ಲಿ ಬುಧವಾರ 40.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ರಾಯಚೂರು 39, ವಿಜಯಪುರ, ಬೀದರ್, ಪಣಂಬೂರು, ದಾವಣಗೆರೆ, ಚಿಂತಾಮಣಿಯಲ್ಲಿ ತಲಾ 37 ಡಿಗ್ರಿ ಸೆಲ್ಸಿಯಸ್ ಹಾಗೂ ಮಡಿಕೇರಿಯಲ್ಲಿ 29.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.