ಹೊಸಪೇಟೆ: ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಮಂಗಳವಾರ ಸಂಜೆ ಬಿರುಸಿನ ಮಳೆಯಾಗಿದೆ.
ದಿನವಿಡೀ ದಟ್ಟ ಕಾರ್ಮೋಡ ಕವಿದು, ವಾತಾವರಣ ತಂಪಾಗಿತ್ತು. ಸಂಜೆ ಆರು ಗಂಟೆ ಸುಮಾರಿಗೆ ಆರಂಭವಾದ ಜಿಟಿಜಿಟಿ ಮಳೆ, ಬಳಿಕ ಬಿರುಸಾಯಿತು. ಒಂದುಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು, ವಾಹನ ಸಂಚಾರ ನಿಧಾನಗೊಂಡಿತು.
ದೈನಂದಿನ ಕೆಲಸಗಳನ್ನು ಮುಗಿಸಿಕೊಂಡು ಮನೆ ಕಡೆ ಹೊರಟಿದ್ದ ವೇಳೆ ಮಳೆ ಬಿದ್ದದ್ದರಿಂದ ರಸ್ತೆಬದಿಯ ಕಟ್ಟಡಗಳನ್ನು ಆಶ್ರಯಿಸಿಕೊಂಡು ಜನ ನಿಂತಿದ್ದರು. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಎಂ.ಪಿ. ಪ್ರಕಾಶ್, ಶಾದಿಮಹಲ್, ಸಿದ್ದಲಿಂಗಪ್ಪ ಚೌಕಿ, ಚಿತ್ತವಾಡ್ಗಿ, ಬಸವೇಶ್ವರ ಬಡಾವಣೆ ಸೇರಿದಂತೆ ಹಲವೆಡೆ ರಸ್ತೆ ತುಂಬೆಲ್ಲ ನೀರು ನಿಂತಿದ್ದರಿಂದ ಅದನ್ನು ದಾಟಿಕೊಂಡು ಹೋಗಲು ಜನ ಹರಸಾಹಸ ಪಟ್ಟರು.
ತಾಲ್ಲೂಕಿನ ಹಂಪಿ, ಕಮಲಾಪುರ, ಮರಿಯಮ್ಮನಹಳ್ಳಿ, ಕಡ್ಡಿರಾಂಪುರ, ಹೊಸೂರು, ಬಸವನದುರ್ಗ, ಧರ್ಮದಗುಡ್ಡ, ನಾಗೇನಹಳ್ಳಿ, ಇಪ್ಪಿತ್ತೇರಿ ಮಾಗಾಣಿ, ಸಂಕ್ಲಾಪುರ, ಕಾರಿಗನೂರು, ವಡ್ಡರಹಳ್ಳಿ, ಧರ್ಮಸಾಗರ, ಬೈಲುವದ್ದಿಗೇರಿ, ಪಾಪಿನಾಯಕನಹಳ್ಳಿ, ವ್ಯಾಸನಕೆರೆ, ಕಲ್ಲಹಳ್ಳಿ, ರಾಜಪುರ, ಚಿನ್ನಾಪುರ, ನಲ್ಲಾಪುರ, ಬುಕ್ಕಸಾಗರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.