ಮಡಿಕೇರಿ: ಕೊಡಗು ಜಿಲ್ಲೆಯ ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಬಹುತೇಕ ಭರ್ತಿಯಾಗಿದೆ. ಸ್ನಾನಘಟ್ಟವು ಮುಳುಗುವ ಹಂತ ತಲುಪಿದೆ.
ನಾಪೋಕ್ಲು, ತಲಕಾವೇರಿಯಲ್ಲೂ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕೊಡಗಿನಲ್ಲಿ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದೆ.
ಪೋಕ್ಲು ಸಮೀಪದ ಬಲಮುರಿಯಲ್ಲಿ ಕಿರು ಸೇತುವೆ ಮೇಲೆ ನದಿಯ ನೀರು ಹರಿಯುತ್ತಿದೆ. ಭಾಗಮಂಡಲ– ಅಯ್ಯಂಗೇರಿ– ನಾಪೋಕ್ಲು ರಸ್ತೆಯ ಮೇಲೂ ನೀರು ಬಂದಿದೆ. ಮಳೆಯ ಅಬ್ಬರ ಮುಂದುವರಿದರೆ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ.
ಮಡಿಕೇರಿ, ಮಾದಾಪುರ ಭಾಗದಲ್ಲೂ ಮಳೆಯಾಗುತ್ತಿದ್ದು ಹಾರಂಗಿ ಜಲಾಶಯದ ಒಳಹರಿವು 1,742 ಕ್ಯುಸೆಕ್ನಿಂದ 3,890 ಕ್ಯುಸೆಕ್ಗೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.