ADVERTISEMENT

ಕರಾವಳಿ, ಕಲಬುರ್ಗಿ, ಬೀದರ್‌ನಲ್ಲಿ ಮಳೆ: ಹಲವೆಡೆ ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 19:30 IST
Last Updated 30 ಆಗಸ್ಟ್ 2021, 19:30 IST
ಕಲಬುರ್ಗಿಯ ಸರ್ಕಾರಿ ಕನ್ಯಾ ಪ್ರೌಢಶಾಲೆ ಬಳಿ ಸೋಮವಾರ ಸುರಿಯುತ್ತಿದ್ದ ಮಳೆಯಲ್ಲೇ ಬೈಕ್ ಸವಾರ ಸಾಗುತ್ತಿರುವುದು
ಕಲಬುರ್ಗಿಯ ಸರ್ಕಾರಿ ಕನ್ಯಾ ಪ್ರೌಢಶಾಲೆ ಬಳಿ ಸೋಮವಾರ ಸುರಿಯುತ್ತಿದ್ದ ಮಳೆಯಲ್ಲೇ ಬೈಕ್ ಸವಾರ ಸಾಗುತ್ತಿರುವುದು   

ಕಲಬುರ್ಗಿ/ಬೀದರ್‌: ಕಲಬುರ್ಗಿ ಮತ್ತು ಬೀದರ್ ಜಿಲ್ಲೆಯ ವಿವಿಧೆಡೆ ಸೋಮವಾರ ಧಾರಾಕಾರ ಮಳೆಯಾಯಿತು.

ಬೀದರ್ ಜಿಲ್ಲೆಯ ಕಮಲನಗರ ತಾಲ್ಲೂಕಿನ ಮತಖೇಡದಲ್ಲಿ ಸಿಡಿಲು ಬಡಿದು ಎಮ್ಮೆ ಮೃತಪಟ್ಟಿದೆ. ಭಾಲ್ಕಿ ತಾಲ್ಲೂಕಿನ ನಾವದಗಿಯ‌ಲ್ಲಿ ಹನುಮಾನ ಮಂದಿರ ಕುಸಿದಿದೆ.

ಭಾಲ್ಕಿ ತಾಲ್ಲೂಕಿನ ಏನಕೂರ್ ಮತ್ತು ಹುಲಸೂರು ತಾಲ್ಲೂಕಿನ ಗೋರಟಾದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ತಾಲ್ಲೂಕಿನ ಕಾರಂಜಾ ಜಲಾಶಯ, ಬಸವಕಲ್ಯಾಣ ಸಮೀಪದ ಚುಳಕಿನಾಲಾ ಹಾಗೂ ಮುಲ್ಲಾಮರಿ ಮೇಲ್ದಂಡೆ ಜಲಾಶಯ ಭರ್ತಿಯಾಗಿವೆ.

ADVERTISEMENT

ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡದಲ್ಲಿ ಅತಿ ಹೆಚ್ಚು 8.1 ಸೆಂ.ಮೀ. ಮತ್ತು ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯಲ್ಲಿ 6.7 ಸೆಂ.ಮೀ ಮಳೆ ದಾಖಲಾಗಿದೆ.

ಕಲಬುರ್ಗಿ ನಗರ ಸೇರಿದಂತೆ ಚಿಂಚೋಳಿ ತಾಲ್ಲೂಕಿನ ವಿವಿಧೆಡೆ ಮಳೆಯಾಗಿದೆ. ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯ ತುಂಬಿದ್ದು ಇಲ್ಲಿಂದ 1,820 ಕ್ಯುಸೆಕ್, ನಾಗರಾಳ ಜಲಾಶಯದಿಂದ 1,060 ಕ್ಯುಸೆಕ್ ನೀರು ಹೊರ ಬಿಡಲಾಗಿದೆ.

ಕಳೆದ 24 ಗಂಟೆಗಳಲ್ಲಿ ಚಿಂಚೋಳಿಯಲ್ಲಿ 7.4 ಸೆಂ.ಮೀ, ಕುಂಚಾವರಂ–4.0 ಸೆಂ.ಮೀ ಮಳೆ ದಾಖಲಾಗಿದೆ.

ಮಂಗಳೂರು ವರದಿ: ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2–3 ದಿನದಿಂದ ಮಳೆ ಸುರಿಯುತ್ತಿದೆ. ಸೋಮವಾರ ಮಳೆಯಿಂದಾಗಿ ಒಂದು ಮನೆಗೆ ಭಾಗಶಃ ಹಾನಿಯಾಗಿದೆ.

‌ಉಡುಪಿ ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆ ಸುರಿಯಿತು. ಸೆ.1ರವರೆಗೆ ಜಿಲ್ಲೆಯಾದ್ಯಂತ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.