ಮಹೇಶ್ ಜೋಶಿ
ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ನಲ್ಲಿ (ಕಸಾಪ) ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿ ದಂತೆ ಮಾಜಿ ಅಧ್ಯಕ್ಷ ಮಹೇಶ್ ಜೋಶಿ ವಿರುದ್ಧ ತಳೆಯುವ ಯಾವುದೇ ನಿಲುವನ್ನು ಮುಂದಿನ ವಿಚಾರಣೆವರೆಗೆ ಜಾರಿಗೊಳಿಸಬಾರದು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ತಾತ್ಪೂರ್ತಿಕ ನಿರ್ದೇಶನ ನೀಡಿದೆ.
ಪರಿಷತ್ನಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿ ಜಾರಿ ಮಾಡಿರುವ ಷೋಕಾಸ್
ನೋಟಿಸ್ ಪ್ರಶ್ನಿಸಿ ಮಹೇಶ್ ಜೋಶಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಾದ– ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಮೇಲ್ನೋಟಕ್ಕೆ, ಆಡಳಿತಾಧಿಕಾರಿ ಷೋಕಾಸ್ ನೋಟಿಸ್ ನೀಡುವ ಅಧಿಕಾರ ವ್ಯಾಪ್ತಿ ಹೊಂದಿರು ವುದನ್ನು ಸಮರ್ಥನೆ ಮಾಡಿಕೊಂಡಿ ದ್ದಾರೆಯೇ ಎಂಬ ಪ್ರಶ್ನೆ ಇದೆ. ಹಾಗಾಗಿ, ಪಕ್ಷಗಾರರ ವಾದ ಆಲಿಸಿದ ನಂತರ ಇದನ್ನು ನಿರ್ಧರಿಸಲಾಗುವುದು’ ಎಂದು
ತಿಳಿಸಿತು.
‘ಮಹೇಶ್ ಜೋಶಿ ಷೋಕಾಸ್ ನೋಟಿಸ್ಗೆ ಉತ್ತರಿಸಬೇಕಿದೆ. ಈಗಾಗಲೇ ಪ್ರತಿಕ್ರಿಯೆ ಸಲ್ಲಿಸುವ ಕಾಲಾವಧಿ ಮುಗಿದಿದ್ದರೂ ಜೋಶಿ ಅವರಿಗೆ ಸಕಾರಣ ಸಮಯಾವಕಾಶ ನೀಡಬೇಕಿದೆ. ಆದ್ದರಿಂದ, ಮಾರ್ಚ್ 2ರ ಒಳಗೆ ಜೋಶಿ ನೋಟಿಸ್ಗೆ ಉತ್ತರಿಸಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿದೆ.
ಅಂತೆಯೇ, ‘ಜೋಶಿ ವಿರುದ್ಧ ಕೈಗೊಳ್ಳುವ ಕ್ರಮವನ್ನು ಮುಂದಿನ ವಿಚಾರಣೆವರೆಗೆ ಜಾರಿಗೊಳಿಸಕೂಡದು’ ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ.
ಮಹೇಶ್ ಜೋಶಿ ಪರ ಪದಾಂಕಿತ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ್ ಮತ್ತು ಸರ್ಕಾರದ ಪರ ಪದಾಂಕಿತ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.