ADVERTISEMENT

ಶುದ್ಧ ನೀರಿನ ದರ ಏರಿಕೆಗೆ ಎಚ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 17:10 IST
Last Updated 8 ಜೂನ್ 2019, 17:10 IST
ಎಚ್‌.ಕೆ ಪಾಟೀಲ
ಎಚ್‌.ಕೆ ಪಾಟೀಲ   

ಗದಗ: ‘ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ಪೂರೈಸಲಾಗುವ ನೀರಿನ ದರವನ್ನು ಏರಿಕೆ ಮಾಡಬಾರದು. ಸರ್ಕಾರದ ಈ ನಿಲುವು ಕಾಂಗ್ರೆಸ್‌ ಪಕ್ಷದ ಸಿದ್ಧಾಂತಕ್ಕೆ ತದ್ವಿರುದ್ಧವಾಗಿದೆ’ ಎಂದು ಶಾಸಕ ಎಚ್‌.ಕೆ ಪಾಟೀಲ ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪತ್ರ ಬರೆದಿರುವ ಅವರು, ‘ಶುದ್ಧ ಕುಡಿಯುವ ನೀರಿನ ಘಟಕಗಳ ಸಮರ್ಪಕ ನಿರ್ವಹಣೆಗಾಗಿ ಹೊಸ ವ್ಯವಸ್ಥೆ ರೂಪಿಸುವ ಆಲೋಚನೆಯನ್ನು ಸ್ವಾಗತಿಸುವೆ. ಆದರೆ, ನೀರಿನ ಘಟಕಗಳ ನಿರ್ವಹಣೆ ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಒಂದು ಲೀಟರ್‌ ನೀರಿಗೆ 10 ಪೈಸೆ ಇದ್ದ ದರವನ್ನು 25 ಪೈಸೆಗೆ ಹೆಚ್ಚಿಸುವ ಮತ್ತು ಇದನ್ನು ಕಾಲಕಾಲಕ್ಕೆ ಪರಿಷ್ಕರಣೆ ಮಾಡುವ ಸರ್ಕಾರದ ನಿಲುವು ಸರಿಯಲ್ಲ’ ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಎಚ್ಕೆ, ‘ಬಡವರು ಹಸಿವೆಯಿಂದ ಬಳಲಬಾರದೆಂದು ಕಾಂಗ್ರೆಸ್‌ ಪಕ್ಷ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಉಚಿತವಾಗಿ ಅಕ್ಕಿ ವಿತರಣೆ ಮಾಡಿದೆ. ನೀರಿನ ದರ ಹೆಚ್ಚಳದ ಚಿಂತನೆಯೇ ಪಕ್ಷದ ನಿಲುವಿಗೆ ವ್ಯತಿರಿಕ್ತವಾದುದು. ದರ ಹೆಚ್ಚಿಸುವ ಬದಲು ನಿರ್ವಹಣೆ ವೆಚ್ಛದಲ್ಲಿಯೇ ಈ ಕೊರತೆಯನ್ನು ಸರ್ಕಾರ ತುಂಬಿಕೊಳ್ಳಬೇಕು. ಬಡವರಿಗೆ 10 ಪೈಸೆಗೆ ಒಂದು ಲೀಟರ್‌ನಂತೆ ನೀರು ಪೂರೈಸುವುದನ್ನು ಮುಂದುವರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಶುದ್ಧ ಕುಡಿಯುವ ನೀರು ಕೇವಲ ದಾಹ ತಣಿಸುವುದಿಲ್ಲ. ಈ ನೀರಿನ ಸೇವನೆಯಿಂದ ಜಲಮೂಲದಿಂದ ಬರುವ ರೋಗಗಳನ್ನು ತಡೆದು, ಜನರ ಆರೋಗ್ಯ ರಕ್ಷಣೆ ಮತ್ತು ಅವರಲ್ಲಿ ಆರ್ಥಿಕ ಚೈತನ್ಯ ತುಂಬಲೂ ನೆರವಾಗಿದೆ’ ಎಂದು ಎಚ್ಕೆ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.