ADVERTISEMENT

ಜೆಡಿಎಸ್‌ ಅನ್ನು ಕೇರಳ, ಕರ್ನಾಟಕಕ್ಕೆ ಹೇಗೆ ಭಾಗ ಮಾಡುತ್ತಾರೋ? ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 10:48 IST
Last Updated 25 ಅಕ್ಟೋಬರ್ 2023, 10:48 IST
<div class="paragraphs"><p>ಡಿ.ಕೆ. ಶಿವಕುಮಾರ್</p></div>

ಡಿ.ಕೆ. ಶಿವಕುಮಾರ್

   

ಬೆಂಗಳೂರು: ‘ಬಿಜೆಪಿ ಮೈತ್ರಿ ಕರ್ನಾಟಕಕ್ಕೆ ಮಾತ್ರ ಎಂದು ಕುಮಾರಣ್ಣ ಹೇಳುತ್ತಿದ್ದಾರೆ. ಆ ಪಕ್ಷದ (ಜೆಡಿಎಸ್‌) ರಾಷ್ಟ್ರೀಯ ಅಧ್ಯಕ್ಷರು ಕೇರಳಕ್ಕೆ ಒಂದು ಭಾಗ, ಕರ್ನಾಟಕಕ್ಕೆ ಒಂದು ಭಾಗ ಎಂದು ಹೇಗೆ ಮಾಡುತ್ತಾರೋ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಶಿವಮೊಗ್ಗದ ಜೆಡಿಎಸ್ ಜಿಲ್ಲಾ ಮುಖಂಡ ಶ್ರೀಕಾಂತ್ ಸೇರಿದಂತೆ ಅನ್ಯಪಕ್ಷಗಳ ಹಲವು ಮುಖಂಡರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಅವರು ಮಾತನಾಡಿದರು.

ADVERTISEMENT

‘ಶ್ರೀಕಾಂತ್ ನನ್ನ ಹಳೆಯ ಗೆಳೆಯ. ಒಳ್ಳೆಯ ಸಂಘಟನಾ ಚತುರ. ಬಹಳ ಕಾಲದಿಂದ ಗಾಳ ಹಾಕುತ್ತಲೇ ಇದ್ದೆ. ಆದರೆ, ಬಲೆಗೆ ಬಿದ್ದಿರಲಿಲ್ಲ. ಈತನಿಗೆ ಸಾಕಷ್ಟು ಆಶ್ವಾಸನೆ ನೀಡಿದ್ದೆವು. ಅದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಶಿವಮೊಗ್ಗ, ಬೆಂಗಳೂರಿನಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಶ್ರೀಕಾಂತ್ ಅವರಿಗೆ ನಾಯಕರನ್ನು ಸೃಷ್ಟಿ‌ಮಾಡುವ ದೊಡ್ಡ ಶಕ್ತಿಯಿದೆ’ ಎಂದರು.

‘ಪಕ್ಷಕ್ಕೆ ಮರಳಿರುವ ತುಮಕೂರಿನ ಶಫಿ ಅಹ್ಮದ್ ಅವರು ಈ ಹಿಂದೆ ದುಡುಕಿನ ನಿರ್ಧಾರ ಯಾಕೆ ತೆಗೆದುಕೊಂಡಿದ್ದರೊ ಗೊತ್ತಿಲ್ಲ, ಮತ್ತೆ ಅವರನ್ನು ಪಕ್ಷಕ್ಕೆ ಆಹ್ವಾನ ಮಾಡುತ್ತಿದ್ದೇವೆ. ಶಫಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಖುದ್ದಾಗಿ ಪರಮೇಶ್ವರ ಅವರೇ ಬರುತ್ತೇನೆ ಎಂದು ಹೇಳಿದ್ದರು. ದಸರಾಗೆ ದುಡಿದ ಪೊಲೀಸರಿಗೆ ಅಭಿನಂದನಾ ಸಮಾರಂಭ ಇದ್ದ ಕಾರಣ ಬರಲಾಗಲಿಲ್ಲ. ಮುಖ್ಯಮಂತ್ರಿ ಕೂಡಾ ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು, ಕೊನೆ ಕ್ಷಣದಲ್ಲಿ ಬೇರೆ ಕಾರ್ಯಕ್ರಮ ನಿಗದಿಯಾದ ಕಾರಣ ಬರಲಾಗಲಿಲ್ಲ. ಎಂದರು.

‘ಪಕ್ಷಕ್ಕೆ ಬಂದಿರುವ ಒಬ್ಬೊಬ್ಬ ನಾಯಕರು, ಕಾರ್ಯಕರ್ತರು ಕನಿಷ್ಠ 10 ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷವೇ ಈ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ಈ ದೇಶದ ಇತಿಹಾಸ, ಎಲ್ಲರೂ ಸೇರಿ ಮತ್ತಷ್ಟು ಪಕ್ಷವನ್ನು ಬಲಪಡಿಸೋಣ. ಇತರರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕೆಲಸವನ್ನು ಬೆಂಗಳೂರಿಗೆ ಬಂದು ಮಾಡಬೇಕಾಗಿಲ್ಲ, ನೀವು ಇರುವ ಸ್ಥಳಗಳಲ್ಲೇ ಈ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಸಚಿವ ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.