ADVERTISEMENT

ಅಕ್ರಮವಾಗಿ ಅದಿರು ಸಾಗಣೆ ಆರೋಪ: ಶಾಸಕ ಸೈಲ್‌ ಜಾಮೀನು ಅವಧಿ ವಿಸ್ತರಣೆ

ಆರೋಗ್ಯ ವರದಿ ಸಲ್ಲಿಕೆಗೆ ಕಮಾಂಡ್‌ ಆಸ್ಪತ್ರೆಗೆ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 0:52 IST
Last Updated 14 ನವೆಂಬರ್ 2025, 0:52 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೇಲೇಕೇರಿ ಬಂದರಿನಿಂದ ಅಕ್ರಮ ಅದಿರು ಸಾಗಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರ ಆರೋಗ್ಯ ಮೌಲ್ಯಮಾಪನ ವರದಿ ಸಲ್ಲಿಸಿ’ ಎಂದು ಹೈಕೋರ್ಟ್‌, ಬೆಂಗಳೂರಿನ ವಾಯುಸೇನಾ ಕಮಾಂಡ್‌ ಆಸ್ಪತ್ರೆಗೆ ನಿರ್ದೇಶಿಸಿದೆ.

ತಮ್ಮ ವಿರುದ್ಧದ ಜಾಮೀನುರಹಿತ ಬಂಧನ ವಾರಂಟ್ ಜಾರಿ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಧ್ಯಂತರ ವೈದ್ಯಕೀಯ ಜಾಮೀನು ಮಂಜೂರು ಮಾಡಿದ್ದನ್ನು ರದ್ದುಪಡಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸತೀಶ್‌ ಸೈಲ್‌ ಅರ್ಜಿ ಸಲ್ಲಿಸಿದ್ದರು.  ನ್ಯಾಯಮೂರ್ತಿ ಎಸ್‌.ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಈ ಅರ್ಜಿಯ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಸತೀಶ್‌ ಸೈಲ್‌ ಅವರು ಇದೇ 15ರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ವಾಯುಸೇನಾ ಕಮಾಂಡ್ ಆಸ್ಪತ್ರೆಯ ಜಠರ-ಕರುಳಿನ ತಜ್ಞ ವೈದ್ಯರ (ಗ್ಯಾಸ್ಟ್ರೋಎಂಟೆರೊಲಾಜಿಸ್ಟ್‌) ಮುಂದೆ ಹಾಜರಾಗಬೇಕು. ಈ ವೇಳೆ ಸೈಲ್‌ ತಮ್ಮ ಆರೋಗ್ಯ ಸಂಬಂಧಿತ ವರದಿಗಳನ್ನು ವೈದ್ಯರಿಗೆ ಒದಗಿಸಬೇಕು. ಇವುಗಳನ್ನು ಪರಿಶೀಲಿಸಿ, ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ಕಮಾಂಡ್ ಆಸ್ಪತ್ರೆ ಮೌಲ್ಯಮಾಪನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿದೆ.

ADVERTISEMENT

‘ಒಂದೊಮ್ಮೆ ಕಮಾಂಡ್‌ ಆಸ್ಪತ್ರೆಯಲ್ಲಿ ಜಠರ ಕರುಳಿನ ತಜ್ಞ ವೈದ್ಯರು ಇಲ್ಲವೆಂದಾದರೆ ಬೇರೆ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಗಾಗಲು ಸೈಲ್‌ ಅವರಿಗೆ ಕಮಾಂಡ್‌ ಆಸ್ಪತ್ರೆ ಸೂಚಿಸಬಹುದಾಗಿದೆ’ ಎಂದು ನ್ಯಾಯಪೀಠ ಆದೇಶಿಸಿದೆ. ಅಂತೆಯೇ, ಸೈಲ್‌ಗೆ ನೀಡಲಾಗಿರುವ ಮಧ್ಯಂತರ ವೈದ್ಯಕೀಯ ಜಾಮೀನು ಅವಧಿಯನ್ನು ಇದೇ 20ರವರೆಗೆ ವಿಸ್ತರಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಸೈಲ್‌ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್ ಜೆ.ಚೌಟ ಹಾಗೂ ಎಸ್‌.ಸುನಿಲ್ ಕುಮಾರ್ ಮತ್ತು ಇ.ಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಅರವಿಂದ ಕಾಮತ್‌ ಹಾಜರಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.