ಬೆಂಗಳೂರು: ‘ಭಾರತ– ಚೀನಾ ಗಡಿಯಲ್ಲಿ ಸೈನಿಕರ ನಡುವೆ ನಡೆದ ಸಂಘರ್ಷ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೆಲವು ವಿಷಯಗಳನ್ನು ದೇಶದ ಜನರ ಮುಂದಿಡಬೇಕು. ಮುಚ್ಚಿಡುವುದು ಸರಿಯಲ್ಲ’ ಎಂದು ಕೇಂದ್ರ ಸರ್ಕಾರದ ನಡೆಗೆ ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಅವರು, ‘ಗುಪ್ತಚರ ಲೋಪ ಆಗಿದ್ದರೂ ಹೇಳಬೇಕು. ಸೈನಿಕರಿಗೆ ಶಸ್ತ್ರಾಸ್ತ್ರ ಕೊಟ್ಟಿಲ್ಲವೆಂದರೂ ಹೇಳಬೇಕು. ಜನರಲ್ಲಿ ತಪ್ಪು ಭಾವನೆ ಹೋಗಬಾರದು. ಈ ವಿಷಯದಲ್ಲಿ ಪ್ರಧಾನಿ ಯಾವುದನ್ನೂ ಮುಚ್ಚಿಡಬಾರದು’ ಎಂದು ಅವರು ಹೇಳಿದರು.
‘ಒಂದು ಕಡೆ ಕೋವಿಡ್ 19ನಿಂದ ಸಾಕಷ್ಟು ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಮತ್ತೊಂದೆಡೆ ಚೀನಾ ತನ್ನ ಕುತಂತ್ರ ಪ್ರದರ್ಶಿಸುತ್ತಿದೆ. ಈ ಹಿಂದೆ, ಜವಾಹರ್ ಲಾಲ್ ನೆಹರು ಅವರ ಕಾಲದಲ್ಲೂ ಚೀನಾ ದಾಳಿ ನಡೆಸಿತ್ತು. ಆದರೆ, ಚೀನಾದವರಿಗೆ ಮೋದಿ ಹೆಚ್ಚು ಬೆಲೆ ಕೊಟ್ಟರು. ನರಿ ಬುದ್ದಿ ಪ್ರದರ್ಶಿಸುವ ಚೀನಾಗೆ ಅಷ್ಟೊಂದು ಮಹತ್ವ ಕೊಡಬಾರದಿತ್ತು. ನೆರೆಹೊರೆಯವರು ಎಂದು ಮೋದಿ ಅಲ್ಲಿಗೆ ಹೋಗಿದ್ದಾರೆ. ಅವರು ಇಲ್ಲಿಗೆ ಬಂದಿದ್ದಾರೆ. ಆದರೆ, ಚೀನಾ ಬೆನ್ನಿಗೆ ಇರಿಯುವುದನ್ನು ಬಿಟ್ಟಿಲ್ಲ. ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ’ ಎಂದು ಆರೋಪಿಸಿದರು.
‘ಚೀನಾದ ಅತಿರೇಕದ ವರ್ತನೆಯ ವಿರುದ್ಧ ಇಂದು ಇಡೀ ದೇಶದ ಜನ ಒಂದಾಗಿದ್ದಾರೆ. ಭಿನ್ನಾಬಿಪ್ರಾಯ ಹೇಳಿಕೆಗಳು ಸರಿಯಲ್ಲ. ನೆಲ, ಜಲ, ಭಾಷೆ, ರಾಷ್ಟ್ರೀಯತೆ ವಿಷಯ ಬಂದಾಗ ಎಲ್ಲರೂ ಒಟ್ಟಾಗಿ ಎದುರಿಸಬೇಕು’ ಎಂದು ಖರ್ಗೆ ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.