ADVERTISEMENT

ಸಂವಿಧಾನ ಬದಲಾವಣೆ ಬದಲು ದುರ್ಬಳಕೆ: ಮೋದಿ ನಡೆಗೆ ಮಾಜಿ ಸಚಿವ ಚಂದ್ರಶೇಖರ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 15:44 IST
Last Updated 24 ಡಿಸೆಂಬರ್ 2024, 15:44 IST
ಬಿ.ಕೆ. ಚಂದ್ರಶೇಖರ್‌
ಬಿ.ಕೆ. ಚಂದ್ರಶೇಖರ್‌   

ಬೆಂಗಳೂರು: ಜನಾಕ್ರೋಶಕ್ಕೆ ಹೆದರಿ ಸಂವಿಧಾನ ಬದಲಾವಣೆ ಹೇಳಿಕೆಗಳಿಂದ ಹಿಂದೆ ಸರಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖಂಡರು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಂವಿಧಾನದ ಆಶಯಗಳನ್ನೇ ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಕೆ. ಚಂದ್ರಶೇಖರ್‌ ದೂರಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚುನಾವಣಾ ಆಯೋಗ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸೇರಿದಂತೆ ಎಲ್ಲ  ಸಂಸ್ಥೆಗಳಲ್ಲೂ ಹಸ್ತಕ್ಷೇಪ ನಡೆಸಿದೆ. ಹಿಂದುತ್ವದ ಸಿದ್ದಾಂತಗಳಿಗೆ ಬದ್ಧರಾಗಿರುವ ಅಧಿಕಾರಿಗಳನ್ನೇ ಆಯಕಟ್ಟಿನ ಸ್ಥಳಗಳಿಗೆ ನೇಮಕ ಮಾಡಿ, ವಿರೋಧ ಪಕ್ಷಗಳ ವಿರುದ್ಧ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ನ್ಯಾಯಾಂಗ, ಪೊಲೀಸ್‌ ವ್ಯವಸ್ಥೆಯಲ್ಲೂ ಹಸ್ತಕ್ಷೇಪಕ್ಕೆ ನಿರಂತರ ಪ್ರಯತ್ನಗಳು ನಡೆದಿವೆ. 370 ವಿಧಿ ರದ್ದು, ಅಯೋಧ್ಯೆ ವಿವಾದದ ತೀರ್ಪು ಸೇರಿದಂತೆ ತಮಗೆ ಅನುಕೂಲವಾಗುವ ವಾತಾವರಣ ಸೃಷ್ಟಿಸಿಕೊಟ್ಟವರಿಗೆ ನಿವೃತ್ತಿಯ ನಂತರ ಉತ್ತಮ ಸ್ಥಾನಮಾನ ನೀಡಲಾಗಿದೆ. ಇಂತಹ ಪ್ರಯತ್ನಗಳ ಮೂಲಕ ಸಂವಿಧಾನಕ್ಕೆ ತಿದ್ದುಪಡಿ ತಾರದೇ ಸಂವಿಧಾನದ ನೈತಿಕತೆಯನ್ನು ಕುಗ್ಗಿಸುವ ಪ್ರಯತ್ನ ನಡೆದಿದೆ ಎಂದರು.

ADVERTISEMENT

ಅಂಬೇಡ್ಕರ್‌ ಅವರಿಗೆ ಕ್ಷೇತ್ರ ದೊರಕಿಸಿಕೊಟ್ಟು, ಅವರನ್ನು ಮೊದಲ ಕಾನೂನು ಮಂತ್ರಿ ಮಾಡಿದ್ದೇ ಕಾಂಗ್ರೆಸ್‌. ಎಲ್ಲ ಕಾಲದಲ್ಲೂ ನಾಯಕರ ನಡುವೆ ಭಿನ್ನಾಭಿಪ್ರಾಯ ಸಹಜ. ಅದನ್ನೇ ನೆಪಮಾಡಿಕೊಂಡು ಕಾಂಗ್ರೆಸ್‌ ಟೀಕಿಸುವ ಕೆಲಸ ನಡೆಯುತ್ತಿದೆ. ಅಂಬೇಡ್ಕರ್‌ ಸಿದ್ದಾಂತ ವಿರೋಧಿಸಿಕೊಂಡು ಬಂದ ಪಕ್ಷವು ರಾಜಕೀಯ ಕಾರಣಗಳಿಗಾಗಿ ಈಗ ಅವರ ನಾಮಸ್ಮರಣೆ ಮಾಡುತ್ತಿದೆ ಎಂದು ಟೀಕಿಸಿದರು.

‘ಪಕ್ಷಪಾತಿ ಉಪರಾಷ್ಟ್ರಪತಿ’ 

ಉಪರಾಷ್ಟ್ರಪತಿ ಜಗದೀಪ್‌ ಧನಕರ್ ಅವರ ನಡವಳಿಕೆ ಪಕ್ಷಪಾತದಿಂದ ಕೂಡಿದೆ. ರಾಜ್ಯಸಭೆಯಲ್ಲಿ ಅವರ ವರ್ತನೆ ಬಿಜೆಪಿ ವಕ್ತಾರರಂತಿದೆ. ವಿರೋಧ ಪಕ್ಷದ ಸಂಸದರನ್ನು ಅಪಹಾಸ್ಯ ಮಾಡುವ ಪರಿಪಾಠ ರೂಢಿಸಿಕೊಂಡಿದ್ದಾರೆ ಎಂದು ಬಿ.ಕೆ. ಚಂದ್ರಶೇಖರ್‌ ಟೀಕಿಸಿದರು. ಹಿಂದೆ ಇದ್ದ ಉಪರಾಷ್ಟ್ರಪತಿಗಳು ತಮ್ಮ ನಡವಳಿಕೆಗಳ ಮೂಲಕ ರಾಜ್ಯಸಭೆಗೆ ಒಂದು ಪರಂಪರೆಯನ್ನೇ ನೀಡಿದ್ದಾರೆ. ಅಂತಹ ಪರಂಪರೆಗೆ ಧನಕರ್‌ ನಡೆ ಒಂದು ಕಪ್ಪುಚುಕ್ಕೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.