ADVERTISEMENT

ಬಿಜೆಪಿಯನ್ನು ಸೋಲಿಸಲು ಇತರ ಪಕ್ಷಗಳು ಒಗ್ಗೂಡಲಿ: ಸುಧೀಂದ್ರ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 19:31 IST
Last Updated 21 ಮಾರ್ಚ್ 2022, 19:31 IST
ಪತ್ರಕರ್ತ ಸುಧೀಂದ್ರ ಕುಲಕರ್ಣಿ (ಮಧ್ಯ) ಮಾತನಾಡಿದರು. (ಎಡದಿಂದ) ಸಮನ್ವಯ ತಂಡದ ಸದಸ್ಯ ಸುಭಾಷ್ ಚಂದ್ರ, ಜನಶಕ್ತಿ ಮೀಡಿಯಾ ಸಂಚಾಲಕ ಗುರುರಾಜ್ ದೇಸಾಯಿ, ಜೆ.ಡಿ.ಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ಹಾಗೂ ಚಿಂತಕ ಸಿದ್ದನಗೌಡ ಪಾಟೀಲ ಇದ್ದರು– ಪ್ರಜಾವಾಣಿ ಚಿತ್ರ
ಪತ್ರಕರ್ತ ಸುಧೀಂದ್ರ ಕುಲಕರ್ಣಿ (ಮಧ್ಯ) ಮಾತನಾಡಿದರು. (ಎಡದಿಂದ) ಸಮನ್ವಯ ತಂಡದ ಸದಸ್ಯ ಸುಭಾಷ್ ಚಂದ್ರ, ಜನಶಕ್ತಿ ಮೀಡಿಯಾ ಸಂಚಾಲಕ ಗುರುರಾಜ್ ದೇಸಾಯಿ, ಜೆ.ಡಿ.ಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್ ಹಾಗೂ ಚಿಂತಕ ಸಿದ್ದನಗೌಡ ಪಾಟೀಲ ಇದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮುಂಬರುವ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಿ ಪರ್ಯಾಯ ಸರ್ಕಾರ ರಚಿಸಬೇಕಾದ ಅಗತ್ಯವಿದೆ. ಇದಕ್ಕಾಗಿ ಇತರ ಎಲ್ಲಾ ಪಕ್ಷಗಳು ಒಗ್ಗೂಡಬೇಕು. ಜನರ ನಡುವೆ ಹೋಗಿ ಕೆಲಸ ಮಾಡಬೇಕು’ ಎಂದು ಪತ್ರಕರ್ತ ಸುಧೀಂದ್ರ ಕುಲಕರ್ಣಿ ಅಭಿಪ್ರಾಯಪಟ್ಟರು.

ಜನಶಕ್ತಿ ಮೀಡಿಯಾ ಹಾಗೂ ಸಮನ್ವಯ ತಂಡದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ:ಮುಂದೇನು?’ ಕುರಿತ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಸೋಮವಾರ ಅವರು ಮಾತನಾಡಿದರು.

‘ಬಿಜೆಪಿಯು 2024ರ ಲೋಕಸಭಾ ಚುನಾವಣೆಯಲ್ಲೂ ಗೆಲುವು ದಾಖಲಿಸಿ ಮತ್ತೊಂದು ಅವಧಿಗೆ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ಆ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌, ಡಿಎಂಕೆ, ಸಮಾಜವಾದಿ ಪಕ್ಷ, ಆಮ್‌ ಆದ್ಮಿ ಪಾರ್ಟಿಗಳು ಒಗ್ಗೂಡಿ ಕೆಲಸ ಮಾಡಬೇಕು’ ಎಂದರು.

ADVERTISEMENT

‘ಬಿಜೆಪಿಯು ಹಿಂದುತ್ವದ ಕಾರ್ಯಸೂಚಿಯನ್ನು ಮುನ್ನೆಲೆಗೆ ತಂದು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದೆ. 2024ರಲ್ಲೂ ಅವರು ಇದೇ ಮಾದರಿ ಇಟ್ಟುಕೊಂಡು ಚುನಾವಣೆ ಎದುರಿಸುವ ಸಾಧ್ಯತೆ ಇದೆ. ಅಸಾದುದ್ದೀನ್‌ ಓವೈಸಿ ಹಾಗೂ ಬಹುಜನ ಸಮಾಜ ಪಕ್ಷದವರು (ಬಿಎಸ್‌ಪಿ) ಬಿಜೆಪಿ ಪರ ಕೆಲಸ ಮಾಡಿದ್ದಾರೆ. ಹೀಗಾಗಿ ಹೆಚ್ಚುವರಿಯಾಗಿ 65 ಸ್ಥಾನ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿದೆ’ ಎಂದು ವಿಶ್ಲೇಷಿಸಿದರು.

‘ಉತ್ತರ ಪ್ರದೇಶ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) ಸೂಕ್ತ ಸಿದ್ಧತೆ ಮಾಡಿಕೊಂಡಿರಲಿಲ್ಲ. ಇದು ಕೂಡ ಬಿಜೆಪಿಗೆ ವರವಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.