ಮಂಡ್ಯ: ಸರ್ಕಾರದ ಸಹಕಾರದೊಂದಿಗೆ ಐತಿಹಾಸಿಕ ಮೇಲುಕೋಟೆ ಕ್ಷೇತ್ರದ ಸ್ಮಾರಕಗಳನ್ನು ಅಭಿವೃದ್ಧಿಗೊಳಿಸಲು ಇನ್ಫೊಸಿಸ್ ಫೌಂಡೇಷನ್ ಮುಂದಾಗಿದೆ.
‘ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಹೊಸ ರೂಪ ನೀಡಲಾಗುವುದು. ಈ ಬಗ್ಗೆ ಅಧಿಕಾರಿಗಳ ವರದಿ ಸ್ವೀಕರಿಸಿದ್ದೇನೆ’ ಎಂದು ಇನ್ಫೊಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಇಲ್ಲಿ ಭಾನುವಾರ ತಿಳಿಸಿದರು.
‘ಪಾರಂಪರಿಕ ಕಟ್ಟಡಗಳಿಗೆ ಮತ್ತಷ್ಟು ಮೆರುಗು ನೀಡಲಾಗುವುದು. ಕ್ಷೇತ್ರದಲ್ಲಿ 107 ಕೊಳ, 78 ಮಂಟಪ ಹಾಗೂ ಹಲವು ಕಲ್ಯಾಣಿಗಳಿವೆ’ ಎಂದು ಹೇಳಿದರು.
‘ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಮಾತನಾಡಿದ್ದೇನೆ. ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕುರಿತು ಇತಿಹಾಸ ತಜ್ಞರು, ವಿಜ್ಞಾನಿಗಳ ಜೊತೆ ಚರ್ಚಿಸಲಾಗುವುದು. ಯಾವುದೇ ಹೊಸ ಕಟ್ಟಡ ನಿರ್ಮಾಣ ಮಾಡುವುದಿಲ್ಲ, ಇರುವ ಕಟ್ಟಡಗಳಿಗೆ ಹೊಸ ರೂಪ ನೀಡಲಾಗುವುದು. ಫೌಂಡೇಷನ್ ತಂತ್ರಜ್ಞರು, ಗುತ್ತಿಗೆದಾರರ ತಂಡ ಕಾಮಗಾರಿ ನಡೆಸಲಿದೆ’ ಎಂದರು.
ಸಂತ್ರಸ್ತರಿಗೆ ₹ 25 ಕೋಟಿ: ‘ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರು ಮನೆ ನಿರ್ಮಿಸಿಕೊಳ್ಳಲು ಸಂಸ್ಥೆ ₹ 25 ಕೋಟಿ ಮೀಸಲಿಟ್ಟಿದೆ. ಮನೆ ನಿರ್ಮಾಣಕ್ಕೆ ಸರ್ಕಾರ ಜಾಗ ಗುರುತಿಸಿದರೆ ನಮ್ಮ ತಂತ್ರಜ್ಞರಿಂದಲೇ ಮನೆ ನಿರ್ಮಿಸಿಕೊಡಲಾಗುವುದು’ ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಸಚಿವ ಸಾ.ರಾ.ಮಹೇಶ್, ‘ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ ಪ್ರಕ್ರಿಯೆ ನಡೆಯುತ್ತಿವೆ. ಶಿಥಿಲಗೊಂಡಿರುವ ಸ್ಮಾರಕಗಳ ದುರಸ್ತಿಗೆ ₹ 32 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಅಭಿವೃದ್ಧಿ ಉದ್ದೇಶದಿಂದ ರಾಜ್ಯದಲ್ಲಿ ಇದುವರೆಗೆ 1,832 ಸ್ಮಾರಕಗಳನ್ನು ಗುರುತಿಸಲಾಗಿದೆ. ಇನ್ನು 25 ಸಾವಿರ ಸ್ಮಾರಕ ಗುರುತಿಸುವ ಕಾರ್ಯ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.