ಬೆಂಗಳೂರು: ಸಾರ್ವಜನಿಕರ ಕುಂದು ಕೊರತೆ ಆಲಿಸಲು ಸರ್ಕಾರ ಆರಂಭಿಸಿರುವ ಏಕೀಕೃತ ದೂರು ನಿವಾರಣಾ ವ್ಯವಸ್ಥೆ (ಇಂಟಿಗ್ರೇಟೆಡ್ ಪಬ್ಲಿಕ್ ಗ್ರಿವಿಯೆನ್ಸ್ ಸಿಸ್ಟಮ್) ಆರಂಭದಲ್ಲೇ ಕುಂಟುತ್ತಿದ್ದು, ಆನ್ಲೈನ್ನಲ್ಲಿ ಸಲ್ಲಿಸಿರುವ ಅಹವಾಲುಗಳನ್ನು ಅಧಿಕಾರಿಗಳು ಕಣ್ಣೆತ್ತಿಯೂ ನೋಡಿಲ್ಲ.
ಸಾರ್ವಜನಿಕರ ಕುಂದು ಕೊರತೆ ದಾಖಲಿಸಿ ನಿವಾರಿಸಲು ‘ಏಕೀಕೃತ ಸಾರ್ವಜನಿಕ ಕುಂದು ಕೊರತೆ ನಿವಾರಣಾ ವ್ಯವಸ್ಥೆ’ ರೂಪಿಸುವ ಬಗ್ಗೆ 2018- 19ರ ಬಜೆಟ್ನಲ್ಲಿ ಸರ್ಕಾರಘೋಷಿಸಿತ್ತು. ಅದರಂತೆ ಇ– ಆಡಳಿತ ಇಲಾಖೆ ಮೂಲಕ ತಂತ್ರಾಂಶವೂ ಅಭಿವೃದ್ಧಿಗೊಂಡಿದೆ.
ಬಿಬಿಎಂಪಿ ಮತ್ತು ಪೌರಾಡಳಿತ ನಿರ್ದೇಶನಾಲಯದಲ್ಲೇ ಹೆಚ್ಚು ಅರ್ಜಿಗಳು ಬಾಕಿ ಉಳಿದುಕೊಂಡಿದ್ದು, ಒಟ್ಟಾರೆ 2,203 ಅಹವಾಲುಗಳು ಅಧಿಕಾರಿಗಳ ಲಾಗಿನ್ನಲ್ಲೇಬಾಕಿ ಇವೆ.
ಇತ್ತೀಚೆಗೆ ಪ್ರಗತಿ ಪರಿಶೀಲನೆ ನಡೆಸಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ‘ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ನಗರಾಭಿವೃದ್ಧಿ ಇಲಾಖೆಯಲ್ಲೇ ಹೆಚ್ಚು ಅರ್ಜಿಗಳು ಬಾಕಿ ಉಳಿದುಕೊಂಡಿವೆ.ತರಬೇತಿ ನೀಡಿದ್ದರೂ ಅಹವಾಲು ವಿಲೇವಾರಿ ಮಾಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ, ಜಲ ಮಂಡಳಿ, ಪೌರಾಡಳಿತ ನಿರ್ದೇಶನಾಲಯ, ಬಿಡಿಎ ಸೇರಿ ನಗರಾಭಿವೃದ್ಧಿ ಇಲಾಖೆಯ ಅಧೀನ ಸಂಸ್ಥೆಗಳಿಗೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಪತ್ರ ಬರೆದು, ಅಹವಾಲು ಪರಿಶೀಲಿಸಲು ಸೂಚನೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.