ADVERTISEMENT

ಮಣ್ಣಿನ ಸಮಸ್ಯೆಯನ್ನು ಪ್ರತ್ಯೇಕವಾಗಿ ನೋಡಿ: ಸದ್ಗುರು

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 20:15 IST
Last Updated 18 ಜೂನ್ 2022, 20:15 IST
ಸದ್ಗುರು ಜಗ್ಗಿ ವಾಸುದೇವ್
ಸದ್ಗುರು ಜಗ್ಗಿ ವಾಸುದೇವ್   

ಬೆಂಗಳೂರು: ‘ಮಣ್ಣಿನ ಮಹತ್ವ ದೊಡ್ಡದು. ಅದು ಉದ್ಯಮಗಳು, ಕೈಗಾರಿಕೆಗಳು ಅಥವಾ ಯಾವುದೇ ಲಾಬಿಗಳ ಜೊತೆ ಘರ್ಷಿಸುವುದಿಲ್ಲ. ಹೀಗಾಗಿ ಉಳಿದ ಪರಿಸರ ಸಮಸ್ಯೆಗಳಿಂದ ಮಣ್ಣಿನ ಸಮಸ್ಯೆಯನ್ನು ‍‍ಪ್ರತ್ಯೇಕಿಸಿ ನೋಡಬೇಕಿದೆ’ ಎಂದು ಈಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಪ್ರತಿಪಾದಿಸಿದರು.

‘ಮಣ್ಣು ಉಳಿಸಿ’ ಅಭಿಯಾನದ ಭಾಗವಾಗಿ 27 ಸಾವಿರ ಕಿ.ಮೀ ಪ್ರಯಾಣಿಸಿರುವ ಅವರು, ಶನಿವಾರ ಕರ್ನಾಟಕಕ್ಕೆ ಬಂದಿದ್ದಾರೆ. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ತಮ್ಮ ಅಭಿಯಾನಕ್ಕೆ 74 ದೇಶಗಳ ಬೆಂಬಲ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರಜನ ಬೆಂಬಲ ಕೊಟ್ಟಿದ್ದಾರೆ. ಹೀಗಾಗಿ
ಮಣ್ಣು ಉಳಿಸುವ ನೀತಿಗಳು ಜಾರಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಬರಗಾಲ ಮಾನವನಿಗೆ ಬಂದೆ ರಗುವ ದೊಡ್ಡ ಆಪತ್ತು. ಹಸಿರು ಕ್ರಾಂತಿಯು ಬರಗಾಲದಿಂದ ತಪ್ಪಿಸಿಕೊಳ್ಳಲು ಒಂದು ದಾರಿಯಂತೆ ದೇಶಕ್ಕೆ ಒದಗಿ ಬಂತು. ಈಗ ನಾವು ನೆಲದ ಮೇಲೆ ಗಟ್ಟಿಯಾಗಿ ನಿಲ್ಲದಿದ್ದರೆ, ನಮ್ಮದು ತ್ರಿಶಂಕು ಪರಿಸ್ಥಿತಿ ಆಗುತ್ತದೆ. ಇವತ್ತು ಕೃಷಿ ಆರ್ಥಿಕ ಪರಿಸ್ಥಿತಿ ಬಹಳ ದುರ್ಬಲವಾಗಿರುವುದರಿಂದಲೇ ಹತಾಶೆಗೊಂಡ ರೈತರು ಆತ್ಮಹತ್ಯೆಯ ಮೊರೆ ಹೋಗುತ್ತಾರೆ. ಗುಣಮಟ್ಟ ಕುಸಿದ ಮಣ್ಣಿನಲ್ಲಿ ಅವರ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲ ಸಿಗದಿರುವುದುಇದಕ್ಕೆ ಒಂದು ಕಾರಣ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ಮಾರ್ಚ್ 21 ರಂದು ಶುರುವಾದ ತಮ್ಮ ನೂರು ದಿನದ ಪಯಣ ಇದೇ 21ರಂದು ಕಾವೇರಿ ಕೂಗಿನ ಯೋಜನೆ ಅನುಷ್ಠಾನದಲ್ಲಿರುವ ಕಾವೇರಿ ನದಿ ತೀರದಲ್ಲಿ ಅಂತಿಮಗೊಳ್ಳಲಿದೆ. ಕಾವೇರಿ ಕೂಗಿನ ಯೋಜನೆಯಡಿ ಸುಮಾರು 50 ಸಾವಿರ ರೈತರು ಅರಣ್ಯ ಕೃಷಿಯನ್ನು ತಮ್ಮದಾಗಿಸಿಕೊಂಡಿದ್ದಾರೆಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.