ಲೋಕಸಭೆ (ಸಾಂಕೇತಿಕ ಚಿತ್ರ)
ನವದೆಹಲಿ: ನಷ್ಟದ ಸುಳಿಗೆ ಸಿಲುಕಿ ಬ್ಯಾಂಕ್ ಸಾಲದಿಂದ ನಲುಗಿರುವ ಬೆಂಗಳೂರಿನ ಐಟಿಐ ಲಿಮಿಟೆಡ್ನ ₹3,473 ಕೋಟಿ ಮೊತ್ತದ ಆಸ್ತಿಯ ನಗದೀಕರಣಕ್ಕೆ ಕೇಂದ್ರ ದೂರಸಂಪರ್ಕ ಇಲಾಖೆ ಮುಂದಾಗಿದೆ.
ಲೋಕಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕೇಳಿದ ಪ್ರಶ್ನೆಗೆ ದೂರಸಂಪರ್ಕ ಖಾತೆಯ ರಾಜ್ಯ ಸಚಿವ ಚಂದ್ರಶೇಖರ ಪೆಮ್ಮಸಾನಿ ಉತ್ತರ ನೀಡಿ, ‘ನಗದೀಕರಣಕ್ಕಾಗಿ 91 ಎಕರೆಯ ನಾಲ್ಕು ಆಸ್ತಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
2024-25ನೇ ಹಣಕಾಸು ವರ್ಷದಲ್ಲಿ, ಕಂಪನಿಯು ₹4,323 ಕೋಟಿ ವಹಿವಾಟು ನಡೆಸಿದೆ. ಬ್ಯಾಂಕ್ಗಳ ಸಾಲ ₹1,325 ಕೋಟಿ ಬಾಕಿ ಇದೆ. ನೌಕರರ ವೇತನ ಹಾಗೂ ನಿವೃತ್ತಿ ವೇತನ ₹339 ಕೋಟಿ ಪಾವತಿಸಿಲ್ಲ. ಸಂಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರವು ಈ ಹಿಂದೆ ₹4,156 ಕೋಟಿ ಹಣಕಾಸಿನ ನೆರವು ನೀಡಿತ್ತು. ನೌಕರರ ಬಾಕಿ ವೇತನ ಪಾವತಿ ಹಾಗೂ ಬ್ಯಾಂಕ್ ಸಾಲಗಳನ್ನು ತೀರಿಸಲು ಕೆಲವು ಖಾಲಿ ಜಾಗಗಳನ್ನು ನಗದೀಕರಣಕ್ಕೆ ಬಳಸಿಕೊಳ್ಳಲು ಯೋಜಿಸಲಾಗಿದೆ. ಇದಕ್ಕಾಗಿ ಐಟಿಐ ಜತೆಗೆ ಮಾತುಕತೆ ನಡೆದಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಯಾವೆಲ್ಲ ಆಸ್ತಿಗಳ ನಗದೀಕರಣ
ಜಾಗ; ಎಕರೆ; ಮೌಲ್ಯ (₹ಕೋಟಿಗಳಲ್ಲಿ)
ಬಿ.ನಾರಾಯಣಪುರ; 10.20; 357
ಕೆ.ಆರ್.ಪುರ; 44; 1651
ಕೆ.ಆರ್.ಪುರ ಐಟಿಐ ಟೌನ್ಶಿಪ್; 21; 823
ಕೆ.ಆರ್.ಪುರ ಐಟಿಐ ಟೌನ್ಶಿಪ್; 16; 642
ಒಟ್ಟು; 91; 3,473
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.