ADVERTISEMENT

ಪಡಿತರ ಚೀಟಿ ಇಲ್ಲದ 2.50 ಲಕ್ಷ ಬಡವರಿಗೆ 2 ತಿಂಗಳ ಪಡಿತರ: ಜೆ.ಸಿ.ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 11:12 IST
Last Updated 9 ಏಪ್ರಿಲ್ 2020, 11:12 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿಲ್ಲದ ಮತ್ತು ನೋಂದಾಯಿಸಿರುವ 2.50 ಲಕ್ಷ ಬಡವರಿಗೆ ಪಡಿತರ ನೀಡಲು ತೀರ್ಮಾನಿಸಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇವರಿಗೆ ಎರಡು ತಿಂಗಳ ಪಡಿತರವನ್ನು ನೀಡಲಾಗುವುದು ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.

ರಾಜ್ಯದ 49 ಬರ ಪೀಡಿತ ತಾಲ್ಲೂಕುಗಳಿಗೆ ಕುಡಿಯುವ ನೀರಿಗಾಗಿ ತಲಾ ₹1 ಕೋಟಿ ನೀಡಲಾಗುವುದು. ಉಳಿದ ಪಟ್ಟಣ ಪಂಚಾಯತ್‌ಗಳಿಗೆ ತಲಾ ₹25 ಲಕ್ಷ ನೀಡುವುದರ ಜತೆಗೆ ಹೆಚ್ಚುವರಿಯಾಗಿ ₹25 ಲಕ್ಷ ನೀಡಲು ತೀರ್ಮಾನಿಸಲಾಗಿದೆ ಎಂದರು.

ADVERTISEMENT

ಲಾಕ್‌ಡೌನ್‌ ಪರಿಣಾಮ ಹೂವು ಬೆಳೆದವರು ನಷ್ಟಕ್ಕೆ ತುತ್ತಾಗಿದ್ದಾರೆ ಎಂಬ ದೂರುಗಳ ಬಂದಿವೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಿ ನಷ್ಟ ಆಗಿದ್ದರೆ ಸೂಕ್ತಪರಿಹಾರ ನೀಡಲು ಸಂಪುಟ ತೀರ್ಮಾನಿಸಿದೆ ಎಂದರು.

ಜಿಎಸ್‌ಟಿಯನ್ನು ಇದೇ 30 ರೊಳಗೆ ಪಾವತಿಸಬೇಕಾಗಿತ್ತು. ಕೊರೊನಾದಿಂದಾಗಿ ಗಡುವನ್ನು ಜೂನ್‌ 30ರವರೆಗೆ ವಿಸ್ತರಿಸಲು ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದೆ ಎಂದೂ ಅವರು ಹೇಳಿದರು.

ಕಂದಾಯ ಭೂಮಿ ಒತ್ತುವರಿ ಮಾಡಿದ ರೈತರ ವಿರುದ್ಧ ಮುಂದಿನ ಆದೇಶ ಆಗುವವರೆಗೆ ಮೊಕದ್ದಮೆ ಹೂಡಬಾರದು. ಫಾರಂ 57 ರಡಿ ಅರ್ಜಿ ಹಾಕಲು ಅವಧಿ ವಿಸ್ತರಣೆ ಮಾಡಲಾಗಿದೆ ಇದಕ್ಕಾಗಿ ಸುಗ್ರಿವಾಜ್ಞೆ ಹೊರಡಿಸಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.