ADVERTISEMENT

ಗೋಮಾಳ ದಾಖಲೆ ನಾನೇ ಕೊಡ್ತೇನೆ: ಎಚ್‌ಡಿಕೆ ಹೇಳಿಕೆ

ಜೆಡಿಎಸ್‌ ಕಾರ್ಯಕರ್ತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 23:21 IST
Last Updated 23 ಜನವರಿ 2020, 23:21 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ಕೇತಗಾನಹಳ್ಳಿಯಲ್ಲಿ ಗೋಮಾಳ ಹೊಡೆದಿದ್ದೀನಿ ಅಂತಾ ಹಿರೇಮಠ, ರವಿ ಕೃಷ್ಣಾರೆಡ್ಡಿ ಹೇಳುತ್ತಿದ್ದಾರೆ, ನಿಮಗೆ ಯಾವ ದಾಖಲೆ ಬೇಕೋ ನಾನೇ ಕೊಡುತ್ತೇನೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಗುರುವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು,ಭ್ರಷ್ಟ ಅಧಿಕಾರಿ ಸಿದ್ದಪ್ಪ ಮಾಡಿರುವ ಅವ್ಯವಹಾರ ಕೆಲಸದ ವಿರುದ್ಧ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತಾರೆಯೇಎಂದು ಪ್ರಶ್ನಿಸಿದರು.

‘ಪಕ್ಷಕ್ಕಾಗಿ ನಾನು ಖಜಾನೆ ಲೂಟಿ ಮಾಡಲಿಲ್ಲ, ಕೇಳಿದಾಗಲೆಲ್ಲ ₹ 50 ಲಕ್ಷ, ₹ 1 ಕೋಟಿ ಕೊಡುವ ಕಾರ್ಯಕರ್ತರು ಇದ್ದಾರೆ. ಅವರಿಂದ ಪಕ್ಷದ ಚಟುವಟಿಕೆಗಳು ನಡೆಯುತ್ತವೆ. ನನ್ನ ಅನುಯಾಯಿಗಳನ್ನು ಸಾಕು ನಾಯಿಗಳು ಎಂದು ಕರೆದಿದ್ದೀರಿ, ಹಾಗೆಯೇ ನಿಮ್ಮನ್ನು ಹುಚ್ಚು ನಾಯಿಗಳು ಎಂದು ಕರೆಯಬೇಕೇ?’ ಎಂದು ಕೇಳಿದರು.

ADVERTISEMENT

ಸಿದ್ದರಾಮಯ್ಯಗೆ ತಿರುಗೇಟು: ‘ತಮ್ಮ ಯೋಜನೆಗಳನ್ನು ಮುಂದುವರಿಸಲಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ನನ್ನ ಬಗ್ಗೆ ಚಿಂತೆ ಮಾಡಬೇಡಿ, ಅದು ಆಗಿ ಹೋಯಿತಲ್ಲ, ನೀವು ಹಣ ಇಡದೇ ಕೇವಲ ಯೋಜನೆಗಳನ್ನು ಘೋಷಣೆ ಮಾಡಿದ್ದಿರಿ, ನಾನು ಅದಕ್ಕೆ ಎಲ್ಲಿಂದ ದುಡ್ಡು ತರಬೇಕಿತ್ತು?’ ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದರು.

ಫೆಬ್ರುವರಿ ಮೊದಲ ವಾರ ಇಲ್ಲಿ ಮಹಿಳಾ ಸಮಾವೇಶ ನಡೆಯಲಿದೆ, ಫೆ.10 ಮತ್ತು 11ರಂದು ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ ಎಂದು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

ಪ್ರತಿಭಟನೆ: ಸಿಎಎ ವಿರೋಧಿಸಿ ನಗರದ ಪುರಭವನದ ಬಳಿ ಶುಕ್ರವಾರ ಸಂಜೆ 3.30ರಿಂದ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಪಕ್ಷದ ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್ ಹೇಳಿದರು.

ಮೂರು ನಿರ್ಣಯಗಳು
ಪೌರತ್ವ (ತಿದ್ದುಪಡಿ) ಕಾಯ್ದೆ ಹಿಂಪಡೆಯಬೇಕು, ನೆರೆ ಪರಿಹಾರ ಕಾರ್ಯ ಅಸಮರ್ಪಕವಾಗಿದ್ದು, ತಕ್ಷಣ ₹ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕು, ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದ್ದು, ಇದರ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು ಹಾಗೂ ಈ ಮೂರೂ ವಿಷಯಗಳ ಬಗ್ಗೆ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.